Wednesday, February 23, 2011

ಸಿರಿಧಾನ್ಯ ಬಳಕೆಯ ಪಾಕವಿಧಾನಗಳಿಗೆ ಬಹುಮಾನ

ಧಾರವಾಡದ ಕೃಷಿ ಮಾಧ್ಯಮ ಕೇಂದ್ರ ಸಿರಿಧಾನ್ಯ ಬಳಕೆಯ ಪಾಕವಿಧಾನಗಳಿಗೆ ಬಹುಮಾನ ನೀಡಲು ಉದ್ದೇಶಿಸಿದೆ. ಸಾವಿ, ರಾಗಿ, ನವಣೆ, ಸಜ್ಜೆ, ಉದಲು, ಕೊರ್ಲೆ, ಬರಗ ಮುಂತಾದ ಸಿರಿಧಾನ್ಯಗಳಿಂದ ತಯಾರಿಸುವ ಸಾಂಪ್ರದಾಯಿಕ ಮತು ಹೊಸ ಅಡುಗೆಗಳನ್ನು ದಾಖಲಿಸುವ ಮತ್ತು ಅವನ್ನು ಪ್ರಚುರಪಡಿಸುವ ಉದ್ದೇಶದೊಂದಿದೆ ಭಾರತೀಯ ಸಿರಿ ಧಾನ್ಯಗಳ ಜಾಲ (ಮಿಲೆಟ್ ನೆಟ್ವರ್ಕ್ ಆಫ್ ಇಂಡಿಯಾ, 'ಮಿನಿ')ದ ಸಹಯೋಗದೊಂದಿಗೆ ಈ ಬಹುಮಾನ ಯೋಜನೆ ಹಮ್ಮಿಕೊಳ್ಳಲಾಗಿದೆ. ಇದುವರೆಗೆ ಒರಟುಧಾನ್ಯಗಳೆಂದು ಕಡೆಗಣಿಸಲ್ಪಟ್ಟಿರುವ, ಆದರೆ ಅಪಾರ ಪೌಷ್ಟಿಕಾಂಶಗಳ ಆಗರವಾಗಿರುವ ಮತ್ತು ಆಹಾರ ಭದ್ರತೆಗೆ ಪೂರಕವಾಗಿರುವ ಈ ಆಹಾರಧಾನ್ಯಗಳನ್ನು ಮತ್ತೆ ಜನಪ್ರಿಯಗೊಳಿಸುವ ನಿಟ್ಟಿನಲ್ಲಿ ಪಾಕವಿಧಾನ ದಾಖಲಾತಿ, ಪ್ರಚಾರವೂ ಸೇರಿದೆ.

ಆಸಕ್ತರು ಸಿರಿಧಾನ್ಯಗಳಿಂದ ತಯಾರಿಸುವ ಅಥವಾ ಅವುಗಳ ಬಳಕೆಯನ್ನೊಳಗೊಂಡ ಯಾವುದೇ ಬಗೆಯ ಅಡುಗೆಯ ಬಗ್ಗೆ ವಿವರ ಕಳಿಸುವಂತೆ ಕೋರಿಕೆ. ಅಂತಹ ಅಡುಗೆಗಳು ಸಾಂಪ್ರದಾಯಿಕವಾಗಿರಬಹುದು ಅಥವಾ ಹೊಸ ಅಡುಗೆಯಾಗಿರಬಹುದು. ಸಾಂಪ್ರದಾಯಿಕ ವಿಶೇಷ ಅಡುಗೆಗಳಿಗೆ ಆದ್ಯತೆ. ಪ್ರವೇಶಗಳನ್ನು ಕಳುಹಿಸುವಾಗ ಅಡುಗೆಗೆ ಬೇಕಾಗುವ ಸಾಮಗ್ರಿಗಳು, ಪಾಕ ವಿಧಾನ, ಆರೋಗ್ಯದ ದೃಷ್ಟಿಯಲ್ಲಿ (ರುಚಿ, ಶಕ್ತಿ, ಸತ್ವ, ಋತುಮಾನಕ್ಕನುಗುಣವಾಗಿ ಸೇವನೆ, ತಾಳಿಕೆ) ಅದರ ಮಹತ್ವ, ರಾಜ್ಯದ ಯಾವ ಭಾಗದಲ್ಲಿ ಈ ಅಡುಗೆ ಜನಪ್ರಿಯ ಇತ್ಯಾದಿ ವಿವರಗಳನ್ನು ನಮೂದಿಸಬೇಕು.

ಜತೆಗೆ ಪ್ರವೇಶ ಕಳುಹಿಸುವವರ ಪುಟ್ಟ ಪರಿಚಯ (ಹೆಸರು, ಉದ್ಯೋಗ, ವಿಳಾಸ ಹಾಗೂ ಸಿರಿಧಾನ್ಯಗಳ ಕುರಿತು ಆಸಕ್ತಿಯ ಕಾರಣ) ಬರೆದಿರಬೇಕು. ಆಯ್ದ ಹತ್ತು ಪಾಕವಿಧಾನಗಳಿಗೆ ಬಹುಮಾನ ನೀಡಲಾಗುವುದು. ಎಲ್ಲ ಉತ್ತಮ ಪಾಕವಿಧಾನಗಳ ವಿವರವನ್ನು ಸಿರಿಧಾನ್ಯ ಕುರಿತ ಪುಸ್ತಕದಲ್ಲಿ ಪ್ರಕಟಿಸಲಾಗುವುದು.

ಪ್ರವೇಶ ತಲುಪಲು ಕೊನೆಯ ದಿನಾಂಕ: ಮಾರ್ಚ್ 20, 2011.

ಕಳುಹಿಸಬೇಕಾದ ವಿಳಾಸ:
ಕೃಷಿ ಮಾಧ್ಯಮ ಕೇಂದ್ರ, 119, 1ನೇ ಮುಖ್ಯರಸ್ತೆ, ನಾಲ್ಕನೇ ಅಡ್ಡರಸ್ತೆ, ನಾರಾಯಣಪುರ, ಧಾರವಾಡ - 580008.

Wednesday, February 16, 2011

ಸೈಕಲ್ ಜಾಥಾದ ಮೂಲಕ ಎಂಡೋ ಜಾಗೃತಿ


ಕೇರಳದಲ್ಲಿ ಎಂಡೋಸಲ್ಪಾನ್ ವಿಷದ ವಿರುದ್ಧದ ಜನದನಿ ಸರಕಾರದ ನಿದ್ದೆಗೆಡಿಸಿದೆ. ಇತ್ತ ಕರ್ನಾಟಕದಲ್ಲೂ ನಿಷೇಧದ ಸುದ್ದಿ. ಎಂಡೋ ವಿರುದ್ಧ ಸುದ್ದಿಯಾಗದ ಸುದ್ದಿಗಳು ಹಲವು. ಅವೆಲ್ಲಾ ಮಾನವೀಯ ಮಿಡಿತದಿಂದಲೋ, ಸಾಮಾಜಿಕ ಜವಾಬ್ದಾರಿಯಿಂದಲೋ ಆಗುವಂತಾದ್ದು.
ಈಚೆಗೆ ಕೊಲ್ಲಂನ ಅಮೇಶ್, ಶಮ್ನಾದ್ ಇಬ್ಬರು ಯುವಕರು ಕಾಸರಗೋಡು ಜಿಲ್ಲೆಯ ವಾಣಿನಗರಕ್ಕೆ ಸೈಕಲ್ನಲ್ಲಿ ಬಂದಿಳಿದರು. ಇವರೇನೂ ಚಾರಣಕ್ಕೆ ಬಂದವರಲ್ಲ, ಪ್ರವಾಸ ಹಚ್ಚಿಕೊಂಡವರಲ್ಲ. ಇವರದು 'ಎಂಡೋ ವಿರುದ್ಧದ ಜನಜಾಗೃತಿ'.

ಸೈಕಲಿನ ಮುಂಭಾಗದಲ್ಲಿ 'ಬ್ಯಾನ್ ಎಂಡೋಸಲ್ಫಾನ್-ಸೇವ್ ವಿಕ್ಟಿಮ್ಸ್', ಹಿಂಭಾಗದಲ್ಲಿ 'ಕೊಲ್ಲಂ ಟು ಕಾಸರಗೋಡು' ಶೀರ್ಷಿಕೆ ಹೊತ್ತ ಎರಡು ಫಲಕಗಳು. ಎಂಡೋ ಘೋರತೆಯನ್ನು ಶಾಲಾ ಮಕ್ಕಳಿಗೆ ತಿಳಿಹೇಳುವುದು ಮುಖ್ಯ ಉದ್ದೇಶವಾದರೂ ಸಂದರ್ಭ ಬಂದಾಗಲೆಲ್ಲಾ ಸಾರ್ವಜನಿಕರಲ್ಲೂ ಬಿಂಬಿಸಿದ್ದಾರೆ.

2011 ಜನವರಿ 13ರಂದು ಕೊಲ್ಲಂನಿಂದ ಇವರ ಜಾಥಾ ಶುರು. ಸುಮಾರು ಒಂದು ಸಾವಿರ ಕಿಲೋಮೀಟರ್ ಪ್ರಯಾಣ. 32ಕ್ಕೂ ಮಿಕ್ಕಿ ಶಾಲೆಗಳ ಭೇಟಿ. ದಾನಿಗಳು ನೀಡಿದ ಅಲ್ಪ ಸಹಾಯದಿಂದ ಖರ್ಚು ನಿಭಾವಣೆ. ಪಟ್ಟನಂತಿಟ್ಟ, ಆಲಪ್ಪುಳ, ಎರ್ನಾಕುಳಂ, ತ್ರಿಶೂರ್, ಪಾಲಕ್ಕಾಡ್, ಮಲಪ್ಪುರಂ, ಕೋಝಿಕ್ಕೋಡ್, ಕಣ್ಣೂರು ಮೂಲಕ ಸಾಗಿ ಬಂದ ಜಾಥಾ ವಾಣಿನಗರದಲ್ಲಿ ಸಮಾಪನ.

ಕಣ್ಣೂರಿನ ಶಾಲೆಯೊಂದರಲ್ಲಿ ವಿದ್ಯಾರ್ಥಿಗಳು ಇವರೊಡನೆ 'ನೀವು ಕಣ್ಣೂರಿನ ಎಲ್ಲಾ ಶಾಲೆಗಳಿಗೂ ಹೋಗಿ ಜಾಗೃತಿ ಮೂಡಿಸುತ್ತೀರಾ?' ಎಂದು ಕೇಳಿದರಂತೆ. 'ಬಹುಶಃ ಆಗುವುದಿಲ್ಲ' ಎಂದು ಉತ್ತರಿಸಿದಾಗ 'ಪರವಾಗಿಲ್ಲ, ಆ ಕೆಲಸ ನಾವು ಮಾಡ್ತೀವಿ' ಎಂದರಂತೆ ಆ ಎಳೆಯರು!
ಕೊಲ್ಲಂನವರಾದ ಅಮೇಶ್ ಇಲೆಕ್ಟ್ರಾನಿಕ್ ವಿಭಾಗದಲ್ಲಿ ಡಿಪ್ಲೊಮಾ ಪಡೆದ ಹವ್ಯಾಸಿ ಛಾಯಾಚಿತ್ರಕಾರ. ಶಮ್ನಾದ್ ದ್ವಿತೀಯ ವರ್ಷದ ಫಿಸಿಕ್ಸ್ ವಿದ್ಯಾರ್ಥಿ. ಅಲ್ಪಸ್ವಲ್ಪ ಹಣ ಕೂಡಿಸಿ ಎರಡು ಹಳೆಯ ಸೈಕಲನ್ನು ಜಾಥಾಕ್ಕೆ ಬಳಸಿದ ಇವರು, ವಾಣಿನಗರದಲ್ಲಿ ಜಾಥಾ ಕೊನೆಗಳಿಸಿದರು. ಬಳಿಕ ಸೈಕಲನ್ನು ವಾಣಿನಗರ ಮತ್ತು ಸ್ವರ್ಗದ ಎರಡು ಶಾಲೆಗಳಿಗೆ ಕೊಟ್ಟರು. ಜಾಥಾದ ಮಧ್ಯೆ ಸಂಗ್ರಹವಾದ ಹಣದಲ್ಲಿ ಖರ್ಚಾಗಿ ಮಿಕ್ಕಿದ ಮೊತ್ತವನ್ನು ಎಂಡೋ ಸಂತ್ರಸ್ತರಿಗೆ
ನೀಡಿದ್ದಾರೆ.

ಪಾಲಕ್ಕಾಡ್ನ ಮುದಲಮ್ಮಾಡದಲ್ಲಿ ಸುಮಾರು ಎರಡೂವರೆ ಸಾವಿರ ಹೆಕ್ಟೇರ್ ಪ್ರದೇಶದ ಮಾವಿನ ತೋಟಕ್ಕೆ ಎಂಡೋಸಲ್ಫ್ಪಾನ್ ಸಿಂಪಡಿಸಿದ ಪರಿಣಾಮವಾಗಿ ಅನೇಕ ಮಂದಿ ಸಂತ್ರಸ್ತರಾಗಿದ್ದಾರೆ. ಈ ದುರಂತವನ್ನು ಪ್ರಪಂಚಕ್ಕೆ ತೆರೆದಿಡುವ ಉದ್ದೇಶದಿಂದ ಸಾಕ್ಷ್ಯಚಿತ್ರವೊಂದರ ತಯಾರಿಯಲ್ಲಿದ್ದಾರೆ.

'ಕೀಟನಾಶಕ ಕಂಪೆನಿಗಳು ಎಂಡೋ ದುರಂತವನ್ನು ಮರೆಮಾಚುತ್ತಿರುವ ಹುನ್ನಾರಗಳ ಮಧ್ಯೆ ಈ ಯುವಕರ ಸಾಹಸ ಯುವಜನತೆಗೆ ಸ್ಪೂರ್ತಿ' ಎಂದು ಪ್ರಶಂಸಿದ್ದಾರೆ ಹಿರಿಯ ಪತ್ರಕರ್ತ 'ಶ್ರೀ' ಪಡ್ರೆ ಮತ್ತು ಡಾ.ವೈ.ಎಸ್.ಮೋಹನ್ ಕುಮಾರ್.

Monday, February 14, 2011

ಆತ್ಮವಿಶ್ವಾಸ ತುಂಬುವ 'ಕೃಷಿಮೇಳ'



ಒಂದು ಕಾಲಘಟ್ಟದ ಕೃಷಿಯ ಬದುಕನ್ನು ನೆನಪಿಸೋಣ. ಅಡಿಕೆಯ ದರ ಮೂರಂಕೆ ಏರಿತು. ಗದ್ದೆಗಳ ಮೇಲೆ ತೋಟ ಎದ್ದುವು. ದುಪ್ಪಟ್ಟು ವಿಸ್ತಾರವಾದುವು. ಊರಲ್ಲೆಲ್ಲಾ ಹೊಸ ಹೊಸ ಮಹೇಂದ್ರ ಜೀಪುಗಳು ಓಡಾಡುತ್ತಿದ್ದಾಗ ಕಿಟಕಿಯಿಂದ ಇಣುಕಿ ಬೆರಗಾಗುತ್ತಿದ್ದ ದಿನಗಳು ನೆನಪಾಗುತ್ತವೆ.

ಎರಡಂಕಿಗೆ ದರ ಇಳಿದಾಗ 'ಕೃಷಿಯೇ ಪ್ರಯೋಜನವಿಲ್ಲ' ಎಂದೆವು. 'ಈ ದರದಲ್ಲಿ ಬದುಕಲು ಸಾಧ್ಯವಿಲ್ಲ' ಎಂಬ ವಿಷಾದ. ಸಮಾರಂಭವಿರಲಿ, ಶುಭ ಕಾರ್ಯಕ್ರಮವಿರಲಿ - 'ಪ್ರಯೋಜನವಿಲ್ಲ. ಇನ್ನು ಕೃಷಿ ಸಾಧ್ಯವಿಲ್ಲ' ಎಂಬ ಸಂಭಾಷಣೆ. 'ಓ..ಇಂಥವರು ಎಲ್ಲವನ್ನೂ ಮಾರಿ ರಾಜಧಾನಿಯ ಬಸ್ ಹತ್ತಿ ಆಯಿತಂತೆ'..ಇಂತಹ ಸುದ್ದಿಯನ್ನು ಹೊತ್ತು ತರುವ ಒಂದಷ್ಟು ಸುದ್ದಿವಾಹಕರು.
ಸರಿ, ವೆನಿಲ್ಲಾ ತೋಟಕ್ಕೆ ನುಗ್ಗಿತು. ನಿಜಾರ್ಥದಲ್ಲಿ 'ಚಿನ್ನದ ಬೆಳೆ'! 'ಬಾಳು ಬಂಗಾರ' ಎಂಬ ಕ್ಲೀಷೆಯ ಶೀರ್ಷಿಕೆ ಸತ್ಯವಾದ ಕಾಲ. ಬಳ್ಳಿ, ಬೀನ್ಸ್, ಒಣಬೀನ್ಸ್.. ಹೀಗೆ ಮೊಗೆಮೊಗೆದು ಕಾಂಚಾಣವನ್ನು ಮನೆತುಂಬಿಸಿಕೊಂಡೆವು. ವೆನಿಲ್ಲಾ ಕೃಷಿಯೇ ವೈಭವ ಪಡೆಯಿತು. ಬದುಕಿನ ಸ್ಟೈಲ್ ವೆನಿಲ್ಲಾದ ದರದ ಮೇಲೆ ನಿಶ್ಚಯವಾಗತೊಡಗಿತು. ಆಗಲೇ ಅಡಿಕೆಯ ದರ ಕೈಕೊಟ್ಟ ಪರಿಣಾಮದಿಂದ ಒಂದಷ್ಟು ಹೈರಾಣವಾಗಿದ್ದ ಕೃಷಿಕ ಕುಟುಂಬವನ್ನು ವೆನಿಲ್ಲಾ ಆಧರಿಸಿತು. ಕೋವಿ ಹಿಡಿದು ವೆನಿಲ್ಲಾ ತೋಟವನ್ನು ಕಾಯುವಷ್ಟರ ಮಟ್ಟಿಗೆ ದರ ಏರುತ್ತಾ ಹೋಯಿತು.

ಯಾಕೆ ಲಕ್ಷ್ಮಿ ಮುನಿದಳೋ ಏನೋ! ವೆನಿಲ್ಲಾ ದರವೂ ಕುಸಿಯಿತು. ಅದರ ಇಳುವರಿಯನ್ನು, ದರವನ್ನು ನಂಬಿದ್ದ ಕೃಷಿಕನಿಗೆ ಆಘಾತ. ವೆನಿಲ್ಲಾದ ಏರುದರವನ್ನು ಅವಲಂಬಿಸಿ ಕುಟುಂಬ ಬಜೆಟ್ ರೂಪಿಸಿಕೊಂಡ ಬದುಕಿಗೆ ಬ್ರೇಕ್! ನಾಲ್ಕಂಕೆಯಲ್ಲಿದ್ದ ದರ ಮೂರಂಕೆಗೆ ಇಳಿಯಿತು. ಈ ಮಧ್ಯೆ ಅಡಿಕೆ ಕೃಷಿಯತ್ತ ಅನಾದರ. ಇತ್ತ ವೆನಿಲ್ಲಾವೂ ಜಾರಿತು, ಅಡಿಕೆಯೂ ಕೊಟ್ಟಿತು. ನಂತರ ಹೇಗೋ ಚೇತರಿಸಿದರೆನ್ನಿ.

ಈಗ ಕಾರ್ಮಿಕ ಸಮಸ್ಯೆ. ಕೃಷಿ ಕೆಲಸಗಳಿಗೆ ಜನ ಸಿಗುತ್ತಿಲ್ಲ. ಕೃಷಿ ಸ್ಪೆಷಲಿಸ್ಟ್ಗಳೆಲ್ಲಾ ವೃದ್ಧರಾದರು. ಅವರ ಮಕ್ಕಳಿಗೆ ಕೃಷಿ ಬೇಡ. ನಗರದ ಮೋಹ. ಹೀಗಾಗಿ ಸ್ಪೆಷಲಿಸ್ಟ್ಗಳ ಮಕ್ಕಳು ಸ್ಪೆಷಲಿಸ್ಟ್ ಆಗಲಿಲ್ಲ! ಕೃಷಿ ಕೆಲಸಗಳಿಗೆ ಹಿಂಬೀಳಿಕೆ. ಒಂದು ವೇಳೆ ಕೆಲಸಕ್ಕೆ ಜನ ಸಿಕ್ಕರೂ ದುಬಾರಿ ಸಂಬಳ. ಹೀಗೆ ಒಂದಲ್ಲ ಒಂದು ಸಮಸ್ಯೆಗಳ ಮೂಟೆ ಕೃಷಿಕನ ತಲೆಯಿಂದ ಇಳಿಯುವುದೇ ಇಲ್ಲ. ನಾಲ್ಕು ಮಂದಿ ಜತೆ ಸೇರಿದಾಗಲೆಲ್ಲ 'ಒತ್ತಡ ಬದುಕಿನ' ಪೋಸ್ಟ್ಮಾರ್ಟಂ!
ಕೇವಲ ಕೃಷಿ ಮಾತ್ರವಲ್ಲ, ದೇಶಾದ್ಯಂತ ಬೇರೆ ಬೇರೆ ಕ್ಷೇತ್ರಗಳಲ್ಲಿ ಇಂತಹ 'ಒತ್ತಡ'ದ ಬದುಕನ್ನು ಕಾಣಬಹುದು. 'ಬಂದುದನ್ನು ಬಂದ ಹಾಗೆ ಸ್ವೀಕರಿಸಬೇಕು' ಎನ್ನುವುದು ಒಂದು. 'ಕೊರಗುತ್ತಾ ಕೂರುವುದು, ನೆಗೆಟಿವ್ ಮಾತನಾಡುತ್ತಾ ಇರುವುದು' ಇನ್ನೊಂದು.
ಒತ್ತಡಗಳ ಮಧ್ಯೆ ಇದ್ದುದರಲ್ಲಿ ಮುಗುಳ್ನಗು ಮೂಡಿಸುವ ಕೃಷಿಕರೂ ಇಲ್ವಾ. ಅವರಲ್ಲೆಂದೂ ಋಣಾತ್ಮಕವಾದ ಮಾತುಕತೆ, ಚಿಂತನೆಗಳು ಬರುವುದೇ ಇಲ್ಲ. ಬಂದರೂ ಅದು ಮೌನ. 'ಹಾಗೆ ಮಾತನಾಡಿ ಏನೂ ಪ್ರಯೋಜನ? ಪರ್ಯಾಯ ದಾರಿಗಳನ್ನು ನಾವೇ ಕಂಡುಕೊಳ್ಳಬೇಕು' ಎನ್ನುತ್ತಾರೆ ಕೃಷಿಕ ಎಡ್ವರ್ಡ್ ರೆಬೆಲ್ಲೋ.

'ಬೋರ್ಡೋ ಸಿಂಪಡಿಸಲು ಕೆಲಸದವರು ಬರುತ್ತೇನೆಂದು ಹೇಳಿದ್ರು. ಹೇಳಿದ ಸಮಯಕ್ಕೆ ಬರಲೇ ಇಲ್ಲ. ಎಷ್ಟು ದಿನ ಕಾಯುವುದು? ಅವಳು (ಪತ್ನಿ) ಪಂಪು ನಿರ್ವಹಿಸಿದರೆ, ನಾನು ಗೊತ್ತಿದ್ದೋ-ಗೊತ್ತಿಲ್ಲದೆಯೋ ಬೋರ್ಡೋ ಸಿಂಪಡಿಸಿದೆ. ಕ್ರಮೇಣ ರೂಢಿಯಾಯಿತು' ಪತ್ರಕರ್ತ ರಮೇಶ್ ಕೈಂತಜೆ ಹೇಳಿದ ನೆನಪು. ಇರಲಿ. ಇಂತಹ ಒತ್ತಡದ ಸಮಯದಲ್ಲಿ ಮಾನಸಿಕವಾಗಿ 'ಟಾನಿಕ್' ಸಿಕ್ಕರೆ ಚೇತರಿಸಲು ಸಹಕಾರಿ. ಅದ್ಯಾವ ಟಾನಿಕ್?
ಕನ್ನಾಡಿನಲ್ಲಿ ಸರಕಾರಿ ಆಶ್ರಿತವಾಗಿ ಬೆಂಗಳೂರು ಮತ್ತು ಧಾರವಾಡ ಕೃಷಿ ವಿವಿ ವತಿಯಿಂದ ಕೃಷಿ ಮೇಳ ನಡೆಯುತ್ತಿದೆ. ಆದರೆ ಖಾಸಗಿಯಾಗಿ ಜನರ ಸಹಭಾಗಿತ್ವದಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ 'ಕೃಷಿ ಮೇಳ' ಈ ಎರಡೂ ಮೇಳಗಳನ್ನು ಮೀರಿಸುತ್ತದೆ. ಉಡುಪಿ ಜಿಲ್ಲೆಯ ಕಾರ್ಕಳ ಸನಿಹದ ಬಜಗೋಳಿಯಲ್ಲಿ ಫೆಬ್ರವರಿ 4, 5, ಮತ್ತು 6, 2011ರಂದು 31ನೇ 'ಕೃಷಿ ಮೇಳ' ನಡೆದಿತ್ತು.
'ಕೃಷಿ ಮೇಳವೆಂಬುದು ಕೃಷಿಹಬ್ಬದ ವಾತಾವರಣವನ್ನು ಮೂಡಿಸುತ್ತದೆ. ರೈತರಲ್ಲಿ ಆತ್ಮವಿಶ್ವಾಸವನ್ನು ತುಂಬಿಸಲು ಕೃಷಿಮೇಳಗಳ ಕೊಡುಗೆ ದೊಡ್ಡದು' - ಮೇಳದ ಗೋಷ್ಠಿಯೊಂದರ ಮೂಡಿಬಂದ ಅಭಿಪ್ರಾಯ. ಹೌದು. ಕೃಷಿ ರಂಗದ ಒತ್ತಡಕ್ಕೆ ಕಾರಣ, ಆತ್ಮವಿಶ್ವಾಸದ ಕೊರತೆ. ಅದನ್ನು ಮತ್ತೊಮ್ಮೆ ತುಂಬಿಸಲು ನೆರವಾಗುತ್ತದೆ - ಕೃಷಿಮೇಳಗಳು.
ಕೃಷಿ ಜೀವನ ನಮ್ಮಲ್ಲಿ ಪಾರಂಪರಿಕವಾದುದು. ಅದರೊಂದಿಗೆ ಭಾವನಾತ್ಮಕ ಸಂಬಂಧವೂ ಇದೆ, ಇತ್ತು. ಆದರೆ ಕಾಲದ ಆರ್ಭಟ ಅವನ್ನೆಲ್ಲಾ ನುಂಗಿ ನೊಣೆದಿದೆ. ಅದನ್ನು ಮತ್ತೊಮ್ಮೆ ಹಳಿಗೆ ತರುವ ಕೆಲಸವಾಗಬೇಕು.

'ಸರಿ, ಕೃಷಿಮೇಳಗಳಿಂದ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವೇ?' ಮಾತಿನ ಮಧ್ಯೆ ಎಷ್ಟೋ ಸಲ ಇಂತಹ ಪ್ರಶ್ನೆಗಳನ್ನು ಆಲಿಸಿದ್ದೆ. ಫಕ್ಕನೆ ನೋಡಿದಾಗ 'ಹೌದಲ್ಲ' ಅಂತ ಅನ್ನಿಸಿದರೂ ತಪ್ಪಲ್ಲ.
ಇದಕ್ಕೆ ಉತ್ತರ - ಬಜಗೋಳಿ ಕೃಷಿ ಮೇಳದಲ್ಲಿ ಪರಮ ಪೂಜ್ಯ ರಾಜರ್ಷಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಮಾತುಗಳು - 'ಕೃಷಿಕರಲ್ಲಿ ಸ್ವಾಭಿಮಾನ ಮೂಡಿಸುವುದು ಮತ್ತು ಮಾಹಿತಿ ನೀಡುವುದು ಕೃಷಿ ಮೇಳದ ಉದ್ದೇಶ. ಕೃಷಿಕರು ಪ್ರಗತಿಯ ಪಾಲುದಾರರಾಗಬೇಕು. ಕೃಷಿಯಲ್ಲಿ ಸಮಗ್ರ ಅಭಿವೃದ್ಧಿ ಸಾಧಿಸುವಂತಾದರೆ ರೈತನೇ ಕೇಂದ್ರ ಬಿಂದು. ಭೂಮಿಯೇ ಘಟಕ.'

'ಗ್ರಾಮಾಭಿವೃದ್ಧಿ ಯೋಜನೆಯು ಇಂದು ಕೃಷಿಕರ ಬಾಗಿಲು ತಟ್ಟಿದೆ. ಹಳ್ಳಿಗಳಲ್ಲಿನ ಯುವಕ, ಯುವತಿಯರು ನಗರ ಜೀವನಕ್ಕೆ ಹಾತೊರೆಯುವ ಪ್ರವೃತ್ತಿ ಕಡಿಮೆಯಾಗಿದೆ. ಸ್ವಾವಲಂಬಿ ಬದುಕಿಗೆ ಹತ್ತಿರವಾಗುತ್ತಿದ್ದಾರೆ. ಲಾಭದಾಯಕ ಕೃಷಿ ಮಾಡಲು ಸಾಧ್ಯವಿದೆ ಎಂಬುದನ್ನು ಯೋಜನೆ ತೋರಿಸಿಕೊಟ್ಟಿದೆ.'

'ಗುರುಹಿರಿಯ ಬಗ್ಗೆ ಶೃದ್ಧೆ ಇರಬೇಕು. ದೇವರಲ್ಲಿ ಭಕ್ತಿ ಇರಬೇಕು. ಜೀವನದಲ್ಲಿ ನಂಬಿಕೆ-ವಿಶ್ವಾಸವಿರಬೇಕು' - ನಮ್ಮ ಹಿರಿಯರು ನೀಡಿದ ಉಪದೇಶ. 'ಇವಕ್ಕೆಲ್ಲಾ ಅರ್ಥವಿಲ್ಲ' ಎನ್ನುತ್ತ 'ಬುದ್ದಿವಂತರೆಂದು ಹೇಳಿಕೊಳ್ಳುವ' ನಾವು ಬದಿಗೆ ತಳ್ಳಿದ್ದೇವೆ. ಗ್ರಾಮಾಭಿವೃದ್ಧಿ ಯೋಜನೆಯು 'ಶೃದ್ಧೆ, ಭಕ್ತಿ, ನಂಬುಗೆ ಮತ್ತು ವಿಶ್ವಾಸ'ವನ್ನು ಪುನರ್ರೂಪಿಸುವ ಕೆಲಸ ಮಾಡುತ್ತಿದೆ.
ಇದು ಬದುಕಿನ ವಿಚಾರ. ಇದನ್ನೇ ಕೃಷಿಗೆ ಸಮೀಕರಿಸಿದರೆ - ಕೃಷಿಯಲ್ಲಿ ಶೃದ್ದೆ, ದೈವದಲ್ಲಿ ಭಕ್ತಿ, ಪರಸ್ಪರರಲ್ಲಿ ನಂಬುಗೆ ಮತ್ತು ಕೈಗೊಂಡ ಕಾರ್ಯದಲ್ಲಿ ವಿಶ್ವಾಸ.

Sunday, February 6, 2011

ಕೃಷಿಮೇಳ ಬಜಗೋಳಿ








ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ (ರಿ) ಧರ್ಮಸ್ಥಳ ಇದರ 31ನೇ ಕೃಷಿ ಮೇಳವು ಉಡುಪಿ ಜಿಲ್ಲೆಯ ಬಜಗೋಳಿಯಲ್ಲಿ ಫೆ.4, 5 ಮತ್ತು 6ರಂದು ಜರುಗಿತು. ಪೂಜ್ಯ ರಾಜರ್ಷಿ ಡಾ.ವೀರೇಂದ್ರ ಹೆಗ್ಗಡೆಯವರ ಪರಿಕಲ್ಪನೆ. ಲಕ್ಷಾಂತರ ರೈತರ ಪಾಲುಗಾರಿಕೆ. ಚೊಕ್ಕ, ಶಿಸ್ತಿನ ವ್ಯವಸ್ಥೆ. ಸಮಾರೋಪ ಸಮಾರಂಭಕ್ಕೆ 'ನಮ್ಮ' ಮುಖ್ಯಮಂತ್ರಿ ಯಡ್ಯೂರಪ್ಪನವರ ಉಪಸ್ಥಿತಿ.

ರಾಷ್ಟ್ರೀಯ ಆಹಾರ ಭದ್ರತೆಗೆ ದಾರಿ - ಭತ್ತ ಬೇಸಾಯದ ಶ್ರೀ ಪದ್ಧತಿ, ಗ್ರಾಮಾಭಿವೃದ್ಧಿ ಯೋಜನೆಯ ಯಶಸ್ವೀ ಮಾದರಿಗಳು, ಶ್ರೀಮತಿ ಹೇಮಾವತಿ ವಿ.ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಮಹಿಳಾ ವಿಚಾರಗೋಷ್ಠಿ, ಸಾವಯವ ಕೃಷಿ ಮತ್ತು ಲಾಭದಾಯಕ ಹೈನುಗಾರಿಕೆ, ತೋಟಗಾರಿಕೆಯಲ್ಲಿ ಮಿಶ್ರ ಬೆಳೆ ಪದ್ಧತಿ ಮತ್ತು ರಾಷ್ಟ್ರೀಯ ತೋಟಗಾರಿಕಾ ಮಿಶನ್, ಸರಕಾರಿ ಅಧಿಕಾರಿಗಳೊಂದಿಗೆ ಸಂವಾದ, ಕೃಷಿ ಮತ್ತು ಮಾಧ್ಯಮ, ಘನತ್ಯಾಜ್ಯ ನಿರ್ವಹಣೆ ನಮ್ಮೆಲ್ಲರ ಹೊಣೆ, ಕೃಷಿ ಮತ್ತು ಯುವಜನತೆ:ಆಧುನಿಕ ಕೃಷಿಗೆ ಶಾಪವೇ? - ವಿಚಾರಗಳ ಕುರಿತು ಮೂರೂ ದಿನಗಳಲ್ಲಿ ಗೋಷ್ಠಿಗಳು ನಡೆದುವು.

ನಾಲ್ಕುನೂರಕ್ಕೂ ಮಿಕ್ಕಿ ಮಳಿಗೆಗಳಿದ್ದುವು. ಸಭಾಮಂಟಪದ ಸುತ್ತ ಅಡಿಕೆಮನೆ, ತರಕಾರಿಮನೆ, ತರಕಾರಿಗಳ ಪ್ರತಿಕೃತಿ, ಕುಲುಮೆ ಮನೆ, ಭತ್ತಕುಟ್ಟುವ ಕುಟೀರ, ನಾರಿನ ಹಗ್ಗದಿಂದ ರೂಪಿಸಿದ ಕೋಟಿಚೆನ್ನಯರ ಮತ್ತು ಪರಶುರಾಮ ಮೂರ್ತಿಗಳು, ಆಲೆಮನೆ, ಜಾನುವಾರು ಪ್ರದರ್ಶನ, ಕುಕ್ಕುಟ ಪ್ರದರ್ಶನ ಹೆಚ್ಚು ಗಮನ ಸೆಳೆಯಿತು.