Friday, August 22, 2014

ಐಟಿ ದುಡ್ಡು ಕೊಡುತ್ತದೆ, ಯೌವನ ಕೊಡುವುದಿಲ್ಲ!

              "ರಾತ್ರಿ ಪಾಳಿಯ ವೃತ್ತಿ ಮುಗಿಸಿ ಮನೆ ಸೇರಿದಾಗ ಮಗನನ್ನು ಶಾಲಾ ವಾಹನದೊಳಗೆ ತಳ್ಳಿ ಮಡದಿ ಉದ್ಯೋಗಕ್ಕೆ ತೆರಳಿರುತ್ತಾಳೆ. ಸಂಜೆ ಅವರಿಬ್ಬರು ಮನೆಗೆ ಬಂದಿರುವಾಗ ನಾನು ಡ್ಯೂಟಿಗೆ ತೆರಳಿರುತ್ತೇನೆ.  ಮೊಬೈಲಿನಲ್ಲಿ ಮನೆ ನಿರ್ವಹಣೆಯ ಮಾತುಕತೆ. ರವಿವಾರ ಎಲ್ಲರೂ ಜತೆಯಾಗುತ್ತೀವಿ. ಮಕ್ಕಳ ಪಾಲಿಗೆ ನಾನೊಬ್ಬ ಅಪರಿಚಿತ. ಮಕ್ಕಳ ಬಾಲ್ಯದೊಂದಿಗೆ ಬೆರೆಯುವ ದಿನಗಳನ್ನು ಉದ್ಯೋಗ ಕಸಿದುಕೊಂಡಿರುತ್ತದೆ" ಈಗ ಕೃಷಿಕರಾಗಿದ್ದು, ಹಿಂದೆ ಐಟಿ ಉದ್ಯೋಗದಲ್ಲಿದ್ದ ಲಕ್ಷ್ಮಣ್ ಕಳೆದ ದಿನಗಳನ್ನು ಜ್ಞಾಪಿಸಿಕೊಳ್ಳುತ್ತಾರೆ.
                ಲಕ್ಷ್ಮಣ ಮೂಲತಃ ಸುಳ್ಯ ತಾಲೂಕು (ದ.ಕ.) ಗುತ್ತಿಗಾರು ಸನಿಹದ ದೇವಸ್ಯದವರು. ಕೃಷಿ ಪಾರಂಪರಿಕ ವೃತ್ತಿ. ಇಂಜಿನಿಯರಿಂಗ್ ಕಲಿಕೆ ಬಳಿಕ ರಾಜಧಾನಿ ಸೆಳೆಯಿತು. ಬೆಂಗಳೂರಿನ ಹಿಂದುಸ್ಥಾನ್ ಏರಾನಾಟಿಕ್ಸ್ ಲಿ., ಹೆಚ್.ಎ.ಎಲ್.)ಯಲ್ಲಿ ಡಿಸೈನ್ ಇಂಜಿನಿಯರ್ ಆಗಿ ಏಳು ವರುಷ, ಐಟಿ ಕಂಪೆನಿಯೊಂದರಲ್ಲಿ ಏಳೆಂಟು ವರುಷ ದುಡಿತ. ತನ್ನ ಜಾಯಮಾನಕ್ಕೆ ಒಗ್ಗದ ಸೂಟುಬೂಟಿನ ಜೀವನಕ್ಕೆ ಒಗ್ಗಿಸಿಕೊಳ್ಳುವ ಮಾನಸಿಕತೆ.
                 ವಿಮಾನ ಕಂಪೆನಿಯಲ್ಲಿದ್ದಾಗ ಲಕ್ಷ್ಮಣ್ ಎಲ್ಲರಿಗೂ ಅಚ್ಚುಮೆಚ್ಚು. ಹಸಿರು, ಕೃಷಿಯ ಸುತ್ತ ಅವರ ಮಾತುಕತೆ. ವಸತಿಗೃಹದ ಸುತ್ತಲೂ ಹಸುರೆಬ್ಬಿಸಿದ್ದರು. ಇವರ 'ವೀಕೆಂಡ್' ಭಿನ್ನ. ನಗರದಲ್ಲಿ ಕೃಷಿ ಹಿನ್ನೆಲೆಯ ಯಾವುದೇ ಕಾರ್ಯಕ್ರಮಗಳಿಗೆ ಹಾಜರ್. ಜೇನು, ಹೈನು ತರಬೇತಿಗಳಿಗೆ ಭಾಗಿ. ಕೃಷಿ ಮೇಳಗಳಲ್ಲಿ ಸುತ್ತಾಟ. ಸ್ನೇಹಿತರೊಂದಿಗೆ ಅನುಭವಗಳ ವಿನಿಮಯ. ಪಾಸ್ಬುಕ್ಕಿನಲ್ಲಿ ಕಾಂಚಾಣ ನಲಿಯುತ್ತಿದ್ದರೂ ಮನಸ್ಸು ತನ್ನೂರಿನ ಹೊಲ, ತೋಟ, ಹಸಿರಿನತ್ತ ಸುತ್ತುತ್ತಿದ್ದುವು. ತನ್ನ ಬಾಳಿಗೆ ದಿವ್ಯಶ್ರೀ ಪ್ರವೇಶವಾದ ಬಳಿಕವಂತೂ ಅವರ ಯೋಜನೆ, ಯೋಚನೆಗಳೆಲ್ಲವೂ ನಗರದ ಹೊರಗಿನ ಕೃಷಿ, ಹಸಿರಿನ ಸುತ್ತ ರಿಂಗಣಿಸುತ್ತಿದ್ದುವು.
                ದಿವ್ಯಶ್ರೀ ಕೃಷಿ ಹಿನ್ನೆಲೆಯವರು. ಅವರ ಹಿರಿಯರೆಲ್ಲಾ ಹಳ್ಳಿ ಬಿಟ್ಟು ಪಟ್ಟಣ ಸೇರಿದವರು. ನಗರ ಸೇರಿದ ಬಳಿಕ ಸಹಜವಾಗಿ ಕೃಷಿ ಸಂಸ್ಕೃತಿ ಮಸುಕಾಯಿತು. ಬಾಲ್ಯದಿಂದಲೇ ಕೃಷಿಯ ಬದುಕಿನೊಂದಿಗೆ ಬೆಳೆದ ದಿವ್ಯಶ್ರೀ ಕೂಡಾ ನಗರದ ವಾತಾವರಣಕ್ಕೆ ಒಗ್ಗಿಸಿಕೊಂಡವರು. ಲಕ್ಷ್ಮಣ್ ಕೈಹಿಡಿದ ಬಳಿಕ ಇಬ್ಬರ ಆಸಕ್ತಿಗಳೂ ಮಿಳಿತವಾದುವು. ಎಷ್ಟೋ ಸಾರಿ ಬೆಂಗಳೂರಿನ ಒತ್ತಡದ ವಾತಾವರಣದಲ್ಲಿ ಒದ್ದಾಡುತ್ತಾ ಅಸಹನೆಯಿಂದಿದ್ದ ಅವರಿಗೆ ಐಟಿ ಬಿಟ್ಟು ಹಳ್ಳಿಗೆ ಹೋಗೋಣ ಎಂದು ಸಲಹೆ ಮಾಡಿದ್ದೆ ಎನ್ನುತ್ತಾರೆ.
                ನಗರಕ್ಕೆ ಯುವಕರನ್ನು ಆಧುನಿಕ ತಂತ್ರಜ್ಞಾನಗಳ ರಂಗಿನ ಲೋಕವು ಸೆಳೆದುಕೊಳ್ಳುತ್ತದೆ ಅಲ್ವಾ,' ಎನ್ನುವ ನನ್ನ ಕುತೂಹಲವನ್ನು ಲಕ್ಷ್ಮಣ್ ಗಂಭೀರವಾಗಿ ಪರಿಗಣಿಸಿದ್ದರು -
              "ನನ್ನ ಅಪ್ಪನಿಗೆ ಮಗ ಇಂಜಿನಿಯರ್ ಆಗ ಬೇಕೂಂತ ಆಸೆಯಿತ್ತು. ಇಂಜಿನಿಯರ್ ಪದವಿ ಪಡೆದೆ. ನಗರ ಸೇರಿದೆ. ಒತ್ತಡದ ಬದುಕನ್ನು ಅಪ್ಪಿಕೊಂಡೆ. ಅತ್ತಿತ್ತ ತಿರುಗಲು ಹೆಣಗಾಡಬೇಕಾದ ಪುಟ್ಟ ಕ್ಯಾಬಿನ್ನೊಳಗೆ ವೃತ್ತಿ ಜೀವನ. ಪರಸ್ಪರ ಮಾತುಕತೆಯಿಲ್ಲ, ನಗೆಯಿಲ್ಲ, ಭಾವನೆಗಳ ವಿನಿಮಯವಿಲ್ಲ, ಮಣಗಟ್ಟಲೆ ಭಾರ ತಲೆ ಮೇಲೆ ಕುಳಿತಂತಿರುವ ಶುಷ್ಕತೆ. ಹೊತ್ತು ಹೊತ್ತಿಗೆ ಆಹಾರವನ್ನು ಹೊಟ್ಟೆಗಿಳಿಸಿಕೊಳ್ಳುವುದು. ಆರೋಗ್ಯ ವ್ಯತ್ಯಾಸವಾದರೆ ಕಂಪೆನಿಯ ಆಸ್ಪತ್ರೆ ಕಾಯುತ್ತಾ ಇರುತ್ತದೆ!
             ಕೃಷಿಯಲ್ಲಿ ಗೌರವವಿಲ್ಲ, ಯಾರೂ ಮರ್ಯಾಾದೆ ಕೊಡುವುದಿಲ್ಲ ಎನ್ನುವ ಭಾವನೆ. ಮಗ ಉನ್ನತ ಹುದ್ದೆಯಲ್ಲಿದ್ದರೆ 'ನಾನು ಇಂತಹವನ ಅಪ್ಪ' ಎನ್ನುವಲ್ಲಿ ಖುಷಿಯೇನೋ? ಐಟಿ ಉದ್ಯೋಗದಲ್ಲಿ ಸಿಗುವ ಗೌರವ, ಹಣ ಕೃಷಿಯಲ್ಲಿ ಖಂಡಿತಾ ಸಿಗದು. ಆದರೆ ಕಳೆದುಕೊಂಡ ಜೀವನ, ಹಾಳಾದ ಆರೋಗ್ಯ ಮತ್ತೆ ಸಿಗದು. ಗೊತ್ತಾಗುವಾಗ ಮಾತ್ರೆಗಳ ಸಂಬಂಧ ಗಟ್ಟಿಯಾಗಿರುತ್ತದೆ. ಬಹುತೇಕ ಹೆತ್ತವರಿಗೆ ಐಟಿ ಉದ್ಯೋಗದ ಬವಣೆಗಳ ಅರಿವಿಲ್ಲ. ಅಂತಸ್ತು ಮತ್ತು ಭವಿಷ್ಯ ಜೀವನದ ಭದ್ರತೆ ಎನ್ನುವ ಮರೀಚಿಕೆ ಆವರಿಸಿರುತ್ತದೆ. ಇಂತಹ ಉದ್ಯೋಗಕ್ಕೆ ಸಮಾಜವೂ ಬೆಂಬಲಿಸುತ್ತದೆ, ಸಂಭ್ರಮಿಸುತ್ತದೆ. ಉದ್ಯೋಗದ ಸಿರಿತನವನ್ನು ಆರಾಧನೆ ಮಾಡುವ ಹಂತಕ್ಕೆ ತಲುಪುತ್ತದೆ.
                  ಮೋಹಕವಾದ ಐಟಿ ಕ್ಷೇತ್ರವು ನಮ್ಮ ದೂರದೃಷ್ಟಿಯನ್ನು ಕಸಿದುಕೊಳ್ಳುತ್ತದೆ. ವೃತ್ತಿ ಸಂತೃಪ್ತಿಯಿಲ್ಲ. ಸ್ಪಷ್ಟವಾದ ಗುರಿಯಿಲ್ಲ. ಕುಟುಂಬ ಸುಖವಿಲ್ಲ. ಎಳೆ ವಯಸ್ಸಿಯಲ್ಲಿ ಹೆಚ್ಚು ದುಡ್ಡು ಬಂದಾಗ ಹೇಗೆ ಖರ್ಚುು ಮಾಡುವುದೆನ್ನುವ ಜ್ಞಾನವಿಲ್ಲ. ವೀಕೆಂಡಿಗೆ ಸುಖ-ಸಂತೋಷಕ್ಕಾಗಿ ವೆಚ್ಚಗಳ ಹೊಳೆ. ಏರಿಕೆಯಾಗುವ ಸ್ನೇಹಿತರ ಗಡಣ. ಹತ್ತು ಹಲವು ವ್ಯಸನಗಳು ಅಂಟುವುದು ಇಂತಹ ಹೊತ್ತಲ್ಲೇ.  ಸರಿ-ತಪ್ಪುಗಳನ್ನು ಹೇಳುವ ಮಂದಿ ಜತೆಗಿಲ್ಲ. ಕಲಿಕೆಯ ಹಂತದಲ್ಲಿ ಕಟ್ಟಿಕೊಂಡ ಕನಸುಗಳು ಗರಿಕೆದರಿ ತೇಲುತ್ತಿದ್ದಂತೆ ಬದುಕಿನ ಸುಖವು ಜಾರುವುದು ಅರಿವಿಗೆ ಬಂದಿರುವುದಿಲ್ಲ. ಸ್ಥಿತಪ್ರಜ್ಞತೆಯನ್ನು ಎಳವೆಯಲ್ಲೇ ಅಂಟಿಸಿಕೊಂಡವರಿಗೆ ಇವುಗಳ ಭಯವಿಲ್ಲ ಬಿಡಿ!
               ಅಂತಸ್ತು ಹೆಚ್ಚಿದಂತೆ ಬದುಕಿನ ವ್ಯವಸ್ಥೆಗಳೂ ಹೈ-ಫೈ ಆಗಬೇಕಷ್ಟೇ. ಐಟಿ ಉದ್ಯೋಗಿಗಳಿಗೆ ಸಾಲ ಕೊಡಲು ಬ್ಯಾಂಕುಗಳು ತುದಿಗಾಲಲ್ಲಿ  ನಿಂತಿರುತ್ತವೆ. ಸಾಲ ತೆಕ್ಕೊಂಡು ಕೋಟಿಗಟ್ಟಲೆ ಸುರಿದು ಜಾಗ ಖರೀದಿಸಿ, ಐಷರಾಮದ ಮನೆ ನಿರ್ಮಾಣ ಮಾಡಿಕೊಳ್ಳುತ್ತಾರೆ. ಮಗನ ಹಿತಕ್ಕಲ್ಲವಾ, ಒಂದಷ್ಟು ದುಡ್ಡು ಹೆತ್ತವರಿಂದಲೂ ಕೊಡಲ್ಪಡುತ್ತದೆ. 'ಮಗ ಸೆಟ್ಲ್' ಆಗಿದ್ದಾನೆ ಎನ್ನುವ ಹಿಗ್ಗು ಹೆತ್ತವರಲ್ಲಿ ಜೀವಂತವಾಗಿರುವಾಗಲೇ, ನಿವೃತ್ತಿಯ ಹಂತಕ್ಕೆ ತಲುಪುತ್ತಾನೆ. ಮನೆಗಾಗಿ ಮಾಡಿದ್ದ ಬ್ಯಾಂಕ್ ಸಾಲವೂ ಆಗಷ್ಟೇ ಚುಕ್ತಾ ಆಗಿರುತ್ತದೆ!
                 ನಗರದಲ್ಲೇ ಹುಟ್ಟಿ ಬೆಳೆದು ಬದುಕನ್ನು ರೂಪಿಸಿಕೊಳ್ಳುತ್ತಿರುವ ಐಟಿ ಉದ್ಯೋಗಿಗಳು ಬೇರೆಲ್ಲಿಗೆ ಹೋಗಲಿ? ಅವರಿಗದು ಅನಿವಾರ್ಯ. ಹೊಟ್ಟೆಪಾಡಿಗಾಗಿ ಉದ್ಯೋಗ. ಹಳ್ಳಿಯಲ್ಲಿ ತೋಟ ಗದ್ದೆಗಳಿದ್ದು, ಅದನ್ನೆಲ್ಲಾ ಮಾರಿ ನಗರ ಸೇರಿದ ಎಷ್ಟೋ ಕುಟುಂಬವಿಂದು ಮಮ್ಮಲ ಮರುಗುತ್ತಿರುವುದನ್ನು ಹತ್ತಿರದಿಂದ ಬಲ್ಲೆ. ಪುನಃ ಹಳ್ಳಿಗೆ ಹೋಗುವಂತಿಲ್ಲ. ಕೃಷಿಯಲ್ಲಿ ಸುಖವಿಲ್ಲ, ನೆಮ್ಮದಿಯಿಲ್ಲ ಎನ್ನುತ್ತಾ ಸಮಸ್ಯೆಯ ಮೂಟೆಯನ್ನು ಗಗನಕ್ಕೇರಿಸಿದವರೇ, 'ಛೆ.. ತಪ್ಪು ಮಾಡಿಬಿಟ್ಟೆವು, ಹಳ್ಳಿಯ ತೋಟ ಮಾರಬಾರದಿತ್ತು,' ಎನ್ನುವವರೂ ಇಲ್ಲದಿಲ್ಲ. ಆಗ ಕಾಲ ಮಿಂಚಿಹೋಗಿರುತ್ತದೆ..."
               ಲಕ್ಷ್ಮಣ ಐಟಿ ಬದುಕಿನಲ್ಲಿದ್ದೂ, ಅಲ್ಲಿನ ಕಾಣದ ಬದುಕನ್ನು ವಿವರಿಸುತ್ತಾ ಹೋಗುತ್ತಿದ್ದಂತೆ ಮಾತು ಮೌನವಾಗುತ್ತದೆ. ರೋಚಕತೆಯ ವೈಭವವನ್ನೇ ಕಾಣುತ್ತಿದ್ದ ಐಟಿ ಉದ್ಯೋಗ ವೈಯಕ್ತಿಕ ಬದುಕನ್ನು ಕಸಿಯುತ್ತಿದೆ. ಹೀಗಿದ್ದರೂ ’ಇದ್ದಷ್ಟು ದಿನ ಸಂತೋಷದಿಂದ ಇರಬೇಕು. ಹಳ್ಳಿಯಲ್ಲಿದ್ದು ಏನು ಮಾಡಲಿಕ್ಕಿದೆ? ಆ ಕಷ್ಟ ಯಾರಿಗೆ ಬೇಕು. ಬದುಕಿನಲ್ಲಿ ಹಣವೇ ಮುಖ್ಯ” ಎಂದು ಬಾಯಿ ಮುಚ್ಚಿಸುವ ಕಂಠತ್ರಾಣಿಗಳೂ ಇದ್ದಾರಲ್ಲಾ!
                ಐಟಿ ವೃತ್ತಿಯನ್ನು ಲಕ್ಷ್ಮಣ್ ಹಳಿಯುತ್ತಿಲ್ಲ, ವಿರೋಧಿಸುತ್ತಿಲ್ಲ. ಬಂಗಾರದ ಪಂಜರದ ಉದ್ಯೋಗ ಕೈತುಂಬಾ ದುಡ್ಡು ಕೊಡುತ್ತದೆ. ಬದುಕನ್ನು ಹಸನಾಗಿಸುತ್ತದೆ. ಬಡತನದಿಂದ ಮೇಲೆದ್ದು ಬಂದ ಕುಟುಂಬಕ್ಕೆ ಆಸರೆಯಾಗುತ್ತದೆ. ಒಂದು ಕಾಲ ಘಟ್ಟದ ಕೃಷಿ ಬದುಕನ್ನು ಐಟಿ ಆಧರಿಸಿದುದು ಮರೆಯುವಂತಿಲ್ಲ. ದೇಶಕ್ಕೆ ಐಟಿ ಕ್ಷೇತ್ರದಿಂದ ಉತ್ತಮ ಲಾಭ. ಉದ್ಯೋಗಿಗಳಿಗೂ ಪ್ರಯೋಜನ. ಆದರೆ ಕಳೆದುಹೋದ ಸಂಬಂಧ, ಆರೋಗ್ಯ ಮರುಭರ್ತಿ ಹೇಗೆ? ಎಂದು ಪ್ರಶ್ನಿಸುತ್ತಾರೆ.
                 ಕೃಷಿಕರಾಗಿದ್ದೂ ತಮ್ಮ ಮಕ್ಕಳನ್ನು ಐಟಿ ವೃತ್ತಿಗೆ ತಳ್ಳುವ ವ್ಯವಸ್ಥೆಯತ್ತ ಅಸಹನೆಯಿದೆ. ಕೃಷಿಯಲ್ಲಿ ಕೈತುಂಬಾ ಸದ್ದಾಗುವ ಕಾಂಚಾಣ ಕುಣಿಯದಿರಬಹುದು. ಆದರೆ ಬದುಕಿನಲ್ಲಿ ಎಂದೂ ಬತ್ತದ ಆರೋಗ್ಯವನ್ನು ಅನುಭವಿಸಬಹುದು ಎನ್ನುವ ಸತ್ಯ ಮನಗಂಡಿದ್ದಾರೆ. ಬಹುತೇಕ ಹಿರಿಯರ ಮನಃಸ್ಥಿತಿಯೂ ಇದುವೇ. ಆದರೆ ಯಾರೂ ಮಾತನಾಡುವುದಿಲ್ಲವಷ್ಟೇ. ತನ್ನ ಬದುಕು ಕುಸಿಯುತ್ತಿರುವುದನ್ನು ಅರಿತ ಲಕ್ಷ್ಮಣ್ ಐಟಿ ಉದ್ಯೋಗಕ್ಕೆ ವಿದಾಯ ಹೇಳಿ ಎರಡು ವರುಷವಾಯಿತು. ಹಳ್ಳಿ ಮನೆಗೆ ಬಂದರು. ತನ್ನ ತೀರ್ಥರೂಪರು ನಡೆದಾಡಿದ ತೋಟದೆಲ್ಲೆಡೆ ಓಡಾಡಿದರು. ಅವರ ಕನಸನ್ನು ಮುಂದುವರಿಸುವ ಸಂಕಲ್ಪ ಮಾಡಿದರು. ತೋಟವನ್ನು ವ್ಯವಸ್ಥಿತವಾಗಿ ರೂಪಿಸುವತ್ತ ಚಿತ್ತ.
                  ಹನ್ನೆರಡು ಹಸುಗಳುಳ್ಳ ಡೈರಿ ತೆರೆದರು. ಪ್ಯಾಕೆಟ್ ಹಾಲಿಗೆ ಒಗ್ಗಿಕೊಂಡವರು ಲಕ್ಷ್ಮಣರ ಹಸುವಿನ ಹಾಲನ್ನು ಸವಿದರು. ಬೇಡಿಕೆ ಹೆಚ್ಚಾಯಿತು. ಅವರ ಕನಸಿನ ಆಧುನಿಕ ಹಟ್ಟಿ ನಿರ್ಮಾಣವಾಗುತ್ತಿದೆ. ನಗರದಿಂದ ಪುನಃ ಹಳ್ಳಿಗೆ ಬಂದು ಮಣ್ಣನ್ನು ಮುಟ್ಟಿದಾಗ, ಮೆಟ್ಟಿದಾಗ ಬೆನ್ನು ತಟ್ಟುವ ಮನಸ್ಸುಗಳ ಕೊರತೆಯನ್ನು ಕಂಡುಕೊಂಡರು. ಗೇಲಿ ಮಾಡುವ ಮುಖಗಳ ದರ್ಶನ. 'ನೋಡಿ, ಕೃಷಿಯಲ್ಲಿ ಎಷ್ಟು ಕಷ್ಟ ಇದೆಯೆಂದು ನಿಮಗೆ ಗೊತ್ತಾಗುತ್ತೆ, ಎಂದು ಗುಮ್ಮನನ್ನು ಛೂ ಬಿಡುವ ಮಂದಿ. 'ನಾವಿಲ್ಲಿ ಒದ್ದಾಡುತ್ತಾ ಇಲ್ವಾ,' ಕೀಳರಿಮೆಯ ಕೂಪದೊಳಗಿನ ಮಾತುಗಳು.
                  ಲಕ್ಷ್ಮಣರ ಮುಂದೆ ಸ್ಪಷ್ಟ ಗುರಿಯಿದೆ. ತನ್ನ ಸುಖ-ಆರೋಗ್ಯದಾಯಕ ಬದುಕಿಗೆ ಕೃಷಿಯೊಂದೇ ದಾರಿ. ನಗರದಲ್ಲಿ ಓದುತ್ತಿದ್ದ ಮಕ್ಕಳೀಗ ಹಳ್ಳಿಯ ಶಾಲೆಯಲ್ಲಿ ಓದು ಮುಂದುವರಿಸಿದ್ದಾರೆ. ಸಮಾಜದ ಚುಚ್ಚು ಮಾತುಗಳ ಮಧ್ಯೆ ಕೃಷಿಯಲ್ಲಿ ಸುಭಗತೆಯನ್ನು ತೋರಿ ಮಾದರಿಯಾಗಬೇಕೆನ್ನುವ ಛಲವಿದೆ. ’ಐಟಿ ಉದ್ಯೋಗ ದುಡ್ಡು ಕೊಡಬಹುದು ಸಾರ್, ಆದರೆ ಯೌವನ ಕೊಡುವುದಿಲ್”, ಎನ್ನುವ ಲಕ್ಷ್ಮಣರಲ್ಲಿ ಸಮಯ ಕೊಲ್ಲುವ ಫೇಸ್ಬುಕ್ ಅಕೌಂಟ್ ಇಲ್ಲ!


Wednesday, August 20, 2014

ಮಣ್ಣಿನ ಮಕ್ಕಳ ಮನಸಿನ ಮಾತು


              ವಿದ್ಯಾರ್ಥಿಗಳಿಗೆ ಕೃಷಿ ಪಾಠ!
             ವೇದಿಕೆಯ 'ಭೀಷಣ' ಭಾಷಣದಲ್ಲಿ, ಬರೆಹಗಳಲ್ಲಿ, ಕೃಷಿ ಸಂಬಂಧಿ ಮಾತುಕತೆಗಳಲ್ಲಿ ನುಸುಳುವ ಪದಪುಂಜ. ಅಲ್ಲೋ ಇಲ್ಲೋ ಕೆಲವೆಡೆ ಹಸುರಿನ ಸ್ಪರ್ಶವಾದುದು ಬಿಟ್ಟರೆ ಕೃಷಿಯ ಪಾಠವೆನ್ನುವುದು ದೂರದ ಮಾತು.
              ಪುತ್ತೂರಿನ (ದ.ಕ.) ವಿವೇಕಾನಂದ ಕಾಲೇಜಿನ ಪತ್ರಿಕೋದ್ಯಮ ವಿಭಾಗವು ತನ್ನ ವಿದ್ಯಾರ್ಥಿಗಳಿಗೆ 'ಕೃಷಿ ಖುಷಿ' ಎನ್ನುವ ಪಾಕ್ಷಿಕ ಕೃಷಿ ಪಾಠ ಸರಣಿಯನ್ನು ರೂಪಿಸಿದೆ. ತನ್ನ ಪಠ್ಯದ ಕಾರ್ಯಸೂಚಿಗೆ  ಕೃಷಿಯ ಪಾಠ ಅಂಟಿಸಿದೆ. ಈಗಾಗಲೇ ಎರಡು ಉಪನ್ಯಾಸಗಳು ಜರುಗಿದೆ. ಕೃಷಿಕ ಮುಳಿಯ ವೆಂಕಟಕೃಷ್ಣ ಶರ್ಮ, ಸೇಡಿಯಾಪು ಜನಾರ್ದನ ಭಟ್ಟರ ಕೃಷಿ ಜೀವನದ ಅನುಭವಕ್ಕೆ ವಿದ್ಯಾಥರ್ಿಗಳು ಕಿವಿಯಾಗಿದ್ದಾರೆ. ವಿದ್ಯಾರ್ಥಿಗಳ ಮನಸ್ಸು ಅರಳಿದೆ.  
               'ಕೃಷಿ-ಖುಷಿ' ಸರಣಿಯ ಒಂದು ಅವಧಿಗೆ ಒಂದು ಗಂಟೆ ಸಮಯ. ಕೃಷಿ ಅನುಭವಿಗಳಿಂದ ಅನುಭವ ಗಾಥಾ. ಇವರ ಮಾತನ್ನು ಆಧರಿಸಿ ಪ್ರಶ್ನೋತ್ತರ. ನಂತರ ಆಯ್ದ ವಿದ್ಯಾರ್ಥಿಗಳ ತಂಡ ನಿಗದಿತ ದಿವಸದಂದು ಇವರ ತೋಟಕ್ಕೆ ಭೇಟಿ ನೀಡುತ್ತದೆ. ತೋಟ ಸುತ್ತುತ್ತದೆ. ಕುಟುಂಬದೊಂದಿಗೆ ಮಾತನಾಡುತ್ತದೆ. ವಿಚಾರಗಳನ್ನು ದಾಖಲಿಸುತ್ತದೆ.
                ಈ ವಿಚಾರಗಳನ್ನು ಪೋಣಿಸಿ ವಿದ್ಯಾರ್ಥಿಗಳು ಲೇಖನ ಸಿದ್ದಪಡಿಸಬೇಕು. ವಿಭಾಗದ ಮುಖ್ಯಸ್ಥರಿಂದ ಕಾಯಕಲ್ಪಗೊಂಡ ಬರೆಹಗಳನ್ನು ಪತ್ರಿಕೆಗಳಿಗೆ ಕಳುಹಿಸಬಹುದು. ಸಂದರ್ಶನ, ವಿಷಯದ ಆಯ್ಕೆ, ಲೇಖನ ಬರೆಯುವುದು, ಎಡಿಟ್ ಮಾಡುವುದು.. ಜತೆಜತೆಗೆ ಇವಕ್ಕೆ ಪೂರಕವಾದ ಮಾನಸಿಕ ತಯಾರಿಗಳು ಗಟ್ಟಿಯಾಗುತ್ತಾ ಹೋಗಬೇಕೆನ್ನುವುದು ಆಶಯ.
                 ಯುವಜನತೆಗೆ ಕೃಷಿ ಕ್ಷೇತ್ರವನ್ನು ಪರಿಚಯಿಸುವುದು, ಸಸ್ಯಪ್ರೇಮವನ್ನು ಮೂಡಿಸುವುದು. ತಮಗೆ ಲಭ್ಯವಿರುವ ಜಾಗದಲ್ಲಿ ಆರ್ಥಿಕ ದೃಷ್ಟಿಯಿಂದ ಅಲ್ಲದಿದ್ದರೂ, ಬದುಕಿಗೆ ಖುಷಿ ನೀಡುವ ಸಣ್ಣಪುಟ್ಟ ಕೃಷಿಯಲ್ಲಿ ತೊಡಗಿಸಿಕೊಳ್ಳಬೇಕೆಂಬ ದೂರದೃಷ್ಟಿ ಸರಣಿಯಲ್ಲಿದೆ,' ಎನ್ನುತ್ತಾರೆ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ರಾಕೇಶ್ ಕುಮಾರ್ ಕಮ್ಮಜೆ. ಸರಣಿಯ ಉದ್ಘಾಟನೆಯಂದು ಮುಳಿಯ ಶರ್ಮರ ಉಪನ್ಯಾಸ. ಸುಮಾರು ಮೂವತ್ತಕ್ಕೂ ಮಿಕ್ಕಿದ ಸಸ್ಯ, ಹಣ್ಣುಗಳನ್ನು ಪ್ರದರ್ಶನಕ್ಕಾಗಿ ತಂದಿದ್ದರು. ವಿದ್ಯಾರ್ಥಿಗಳಿಗೆ ಅರಿವಾಗದವುಗಳನ್ನು ಶರ್ಮರೇ ಸ್ವತಃ ವಿವರಿಸಿದ್ದರು.
                 ಕಾಲೇಜೊಂದರಲ್ಲಿ ಹೆಜ್ಜೆಯೂರಿದ ಕೃಷಿ ಪಾಠದ ಪ್ರಕ್ರಿಯೆ ಶ್ಲಾಘ್ಯ. ಬಹುತೇಕರು ಕೃಷಿ ಹಿನ್ನೆಲೆಯವರು. ಕಲಿಕೆಯ ಧಾವಂತದಲ್ಲಿ ಕೃಷಿ ಕಲಿಕೆಗೆ ಮನೆಗಳಲ್ಲಿ ಪೂರಕ ವಾತಾವರಣವಿಲ್ಲ. ಹಿರಿಯರಿಂದ ಹೆಚ್ಚು ಅಂಕ ತೆಗೆಯುವ ಒತ್ತಡಕ್ಕೆ ಅನಿವಾರ್ಯವಾಗಿ ವಿದ್ಯಾರ್ಥಿ ತನ್ನನ್ನು ಒಡ್ಡಿಕೊಳ್ಳಬೇಕಾಗುತ್ತದೆ. ಇಂತಹ ಸ್ಥಿತಿಯಲ್ಲಿ ಕೃಷಿ-ಖುಷಿ ಸರಣಿಯಲ್ಲಿ ಪ್ರಸ್ತುತವಾಗುವ ಪ್ರಶ್ನೋತ್ತರಗಳು ಹೆಚ್ಚು ಮೌಲಿಕವಾಗುತ್ತದೆ. 
              ಸರಣಿಯಲ್ಲಿ ಕೃಷಿಕರ ಅನುಭವಗಳನ್ನು ಕೇಳಿ, ಬಳಿಕ ಅವರ ತೋಟಕ್ಕೆ ಹೋದಾಗ ಪ್ರಾಕ್ಟಿಕಲ್ ವಿಚಾರಗಳು ಮನದಟ್ಟಾಗುತ್ತದೆ. ನೆಲದ ಭಾಷೆ ಅರಿಯಲು ಸಹಾಯಕ. ಅಡಿಕೆ ತೋಟದಲ್ಲಿ ಅಡ್ಡಾಡುವಾಗ ಅಡಿಕೆ ಮರವು ಕೇವಲ ಅಡಿಕೆಯನ್ನು ಕೊಡುವ ಮರವಾಗಿರದೆ, ಅದು ಬದುಕನ್ನು ಕಟ್ಟಿಕೊಡುವ ಮರವೆಂಬ ಅರಿವು ಮೂಡುತ್ತದೆ, ಮೂಡಬೇಕು. ಹಸುರಿನೊಳಗೆ ಬದುಕನ್ನು ರೂಪಿಸಿಕೊಂಡ  ಕೃಷಿಕನ ನೋವು-ನಲಿವುಗಳಿಗೆ ಅಲ್ಲಿನ ಪರಿಸರ ಉತ್ತರ ಕೊಡುತ್ತದೆ. ಅದನ್ನು ನೋಡುವ, ಕೇಳುವ ಮನಸ್ಥಿತಿ ರೂಪುಗೊಳ್ಳುತ್ತದೆ. ಕೃಷಿಕರ ಹಲವಾರು ಸಮಸ್ಯೆಗಳು ಮೌನದ ಕೂಪದೊಳಗೆ ಮೌನವಾಗಿರುತ್ತದೆ. ಅದನ್ನು ಮಾತನಾಡಿಸುವ, ಅದಕ್ಕೆ ಮಾತನ್ನು ಕೊಡುವ ಕಷ್ಟದ ಕೆಲಸಕ್ಕೆ ನಿಧಾನವಾಗಿ ಸಜ್ಜಾಗಲು ಇಂತಹ ಕ್ಷೇತ್ರ ಭೇಟಿ ಸಹಾಯಕ.
                ವಾಹಿನಿಯೊಂದರ ರಸಪ್ರಶ್ನೆಯಲ್ಲಿ ತುಳಸಿ ಗಿಡವನ್ನು ಗುರುತುಹಿಡಿಯಲಾಗದ ವಿದ್ಯಾರ್ಥಿಗಳ ಒದ್ದಾಟ ನೋಡಿದ್ದೆ. ಮೂಡುಬಿದಿರೆಯಲ್ಲಿ ಜರುಗಿದ ಕೃಷಿ ಮೇಳದಲ್ಲಿ ಕಾಫಿ ಬೀಜವನ್ನು ಸಾಸಿವೆಕಾಳು ಎಂದು ಗುರುತು ಹಿಡಿವ ವಿದ್ಯಾರ್ಥಿ ಮನಸ್ಸುಗಳನ್ನು ನೋಡಿದ್ದೆ. ಅರಸಿನ, ಶುಂಠಿಯು ಯಾವ ಸಸ್ಯದಲ್ಲಿ ಬೆಳೆಯುತ್ತದೆ ಎನ್ನುವ ಪ್ರಶ್ನೆಯನ್ನು ಎದುರಿಸಿದ್ದೆ. ಇದನ್ನೆಲ್ಲಾ ನೋಡುವಾಗ ವಿದ್ಯಾರ್ಥಿಗಳು ರೂಪುಗೊಳ್ಳುವ ಪರಿ, ಮನೆಯ ವಾತಾವರಣ, ಹೆತ್ತರವ ನಿಲುವು ದಿಗಿಲು ಹುಟ್ಟಿಸುತ್ತದೆ.
                 ಕೃಷಿಕನ ಮಗನೋ, ಮಗಳೋ ಅಂಗಳ ದಾಟಿ ತೋಟದೊಳಗೆ ಹೆಜ್ಜೆಯೂರುವುದು ಕಡಿಮೆ.  ಅಡಿಕೆಯನ್ನು ಹೆಕ್ಕಿರುವುದಿಲ್ಲ. ಒಂದು ಖಂಡಿಗೆ ಎಷ್ಟು ಕಿಲೋ ಅಡಿಕೆ ಎಂಬ ಲೆಕ್ಕಾಚಾರ ಗೊತ್ತಿಲ್ಲ. ಅಡಿಕೆಯ ಕೊಯಿಲು ಯಾವಾಗ ಆಗುತ್ತದೆ ಎನ್ನುವ ಅರಿವಿನಿಂದ ದೂರ. ಗದ್ದೆಯಲ್ಲಿ ತೆನೆಕಟ್ಟಿದ ಭತ್ತದ ತಳಿ ಯಾವುದೆಂದು ಗೊತ್ತಿಲ್ಲ. ಹಟ್ಟಿಯಲ್ಲಿ ಪಶು ಸಂಸಾರ ಎಷ್ಟಿದೆ ಎನ್ನುವ ಲೆಕ್ಕ ಇನ್ನಷ್ಟೇ ಮಾಡಬೇಕಾಗಿದೆ!
                 'ಇದೆಲ್ಲಾ ಗೊತ್ತಾಗಿ ಆಗಬೇಕಾದ್ದೇನು,' ಎಂದು ಉಡಾಫೆ ಉತ್ತರ ನೀಡಿದ ಮುಖಗಳ ಹತ್ತಿರದ ಪರಿಚಯ ನನಗಿದೆ. ಹೆತ್ತವರಿಗೆ ಕೃಷಿಯ ವಿಚಾರ ಹೇಳಲು ಪುರುಸೊತ್ತಿಲ್ಲ. ವಿದ್ಯಾರ್ಥಿಗಳಿಗೆ ಪಾಠದ ಹೊರೆ. ಅಂಕಗಳನ್ನು ಅಟ್ಟಿಸುವ ಹಾವೇಣಿಯಾಟಕ್ಕೆ ಸಜ್ಜಾಗುವ ಪರಿ. ಒಂದು ಕಾಲಘಟ್ಟದಲ್ಲಿ ಕಾಡುಹಣ್ಣುಗಳನ್ನು ತಿಂದು, ಅವುಗಳೊಂದಿಗೆ ಬದುಕನ್ನು ರೂಪಿಸಿದ ಅದೆಷ್ಟೋ ಹಿರಿಯರ ಖುಷಿಯ ಬಾಲ್ಯಗಳು ಈಗಿಲ್ಲ ಎಂದು ಧೈರ್ಯವಾಗಿ ಹೇಳಬಹುದು.
                 ವಿವೇಕಾನಂದ ಕಾಲೇಜಿನ ಪತ್ರಿಕೋದ್ಯಮ ವಿಭಾಗದ 'ಕೃಷಿ-ಖುಷಿ' ಸರಣಿಯು ವಿದ್ಯಾರ್ಥಿಗಳಿಗೆ ಹಸುರಿನ ಭಾಷೆ ಕಲಿಸಲು ಮುಂದಾಗಿದೆ. ಪತ್ರಕರ್ತರಾಗಿ ರೂಪುಗೊಳ್ಳುವ ಮನಸ್ಸುಗಳಿಗೆ ಹಸುರಿನ ಸ್ಪರ್ಶ ನೀಡುವ ಕೆಲಸಕ್ಕೆ ಸಜ್ಜಾಗಿದೆ. ಇಂತಹ ಸಣ್ಣ ಯತ್ನಗಳು ದೊಡ್ಡ ಪರಿಣಾಮಗಳನ್ನು ಖಂಡಿತಾ ಬೀರುತ್ತವೆ. ಪದವಿ ಕಲಿಕೆಯ ಬಳಿಕ ಹೊರ ಬರುವ ವಿದ್ಯಾರ್ಥಿಯ ಫೈಲೊಳಗೆ ಪ್ರಕಟಿತ ಹತ್ತಾರು ಕೃಷಿ ಲೇಖನಗಳು ತುಂಬಿದಾಗ ಉಂಟಾಗುವ ಖುಷಿ ಇದೆಯಲ್ಲಾ, ಅದನ್ನು ವರ್ಣಿಸಲು ಶಬ್ದಗಳಿಲ್ಲ.
                   ಮಾಧ್ಯಮ ಲೋಕದ ನಾಲ್ಕು ಗೋಡೆಗಳ ಒಳಗೆ ವಿಶ್ವವನ್ನು ನೋಡಿ ಅಕ್ಷರಕ್ಕಿಳಿಸುವ ಪ್ರಸ್ತುತ ಕಾಲಘಟ್ಟದಲ್ಲಿ ವಿದ್ಯಾರ್ಥಿಗಳಿಗೆ ಕೃಷಿಯ ನೇರ ದರ್ಶನವನ್ನು ಮಾಡಿಸುವ ವಿವೇಕಾನಂದ ಕಾಲೇಜಿನ ಯೋಜನೆ, ಯೋಜನೆಯಲ್ಲಿ ಕನ್ನಾಡಿಗೆ ಸಂದೇಶವಿದೆ. ಮಣ್ಣಿನ ಮಕ್ಕಳ ಮನಸ್ಸಿನ ಮಾತು ಕನಸಾಗದೆ ನನಸಿನತ್ತ ಒಯ್ಯಲಿ ಎನ್ನುವುದು ಶುಭ ಹಾರೈಕೆ.

Monday, August 11, 2014

ಕೃಷಿ ಪ್ರವಾಸ ತಿರುಗಾಟವಲ್ಲ, ಮಾಹಿತಿಗಳ ಬೇಟೆ

                 "ಕೇರಳದ ಪೊಳ್ಳಾಚಿ, ಕಾಞಿರಪಳ್ಳಿಯ ರಬ್ಬರ್ ಕೃಷಿಯ ವೀಕ್ಷಣೆ-ಅಧ್ಯಯನಕ್ಕಾಗಿ ಪ್ರವಾಸ ಹೋಗಿದ್ದೆವು. ವಿವಿಧ ನರ್ಸರಿಗಳನ್ನು ಭೇಟಿಯಾದೆವು. ರಬ್ಬರ್ ಕೃಷಿಯ 'ಮಾಡಿ-ಬೇಡಿ'ಗಳ ಮಾಹಿತಿ ಪಡೆದೆವು. ಕೃಷಿಕರನ್ನು ಮಾತನಾಡಿಸಿದೆವು. ಕಷ್ಟ-ಸುಖ ಹಂಚಿಕೊಂಡೆವು. ಅಲ್ಲಿನ ಕೃಷಿಕರು ನೀಡಿದ 'ಆನೆಕೊಂಬನ್' ಬೆಂಡೆ ಬೀಜ ನಮ್ಮೂರಿಗೆ ಬಂತು. ಅವರ  ಅಪೇಕ್ಷೆಯಂತೆ ಹಲಸಿನ ಗಿಡಗಳನ್ನು ಒದಗಿಸಿದೆವು. ಅಲ್ಲಿನ ಕೃಷಿಕರೊಂದಿಗೆ ಸಂಬಂಧ ಈಗ ಗಟ್ಟಿಯಾಗಿದೆ", ಕಾಸರಗೋಡು ಜಿಲ್ಲೆಯ ಮೀಯಪದವಿನ ಕೃಷಿಕ ಡಾ.ಡಿ.ಸಿ.ಚೌಟರು ಕೃಷಿ ಪ್ರವಾಸದ ಪರಿಣಾಮಗಳನ್ನು ವಿವರಿಸುತ್ತಾರೆ.
                 ಆನೆಯ ಸೊಂಡಿಲಿನಂತೆ ಭಾಸವಾಗುವುದರಿಂದಲೋ ಏನೋ 'ಆನೆಕೊಂಬನ್ ಬೆಂಡೆ' ಪ್ರಬೇಧ ಮೀಯಪದವಿಗೆ ಬಂತು. ಚೌಟರು ಆಸಕ್ತರಿಗೆ ಬೀಜ ಹಂಚಿದರು. ಏನಿಲ್ಲವೆಂದರೂ ಐವತ್ತಕ್ಕೂ ಮಿಕ್ಕಿ ಕೃಷಿಕರಲ್ಲಿ ಅಭಿವೃದ್ಧಿಯಾಗಿದೆ. ಬೆಂಡೆಕಾಯಿ ಒಂದೂವರೆ ಅಡಿಯಷ್ಟು ಉದ್ದ. ಸ್ಥಳೀಯ ಬೆಂಡೆಯದ್ದೇ ವರ್ಣ. ಇದು ಕಿಲೋಗೆ 20-23 ಬೆಂಡೆ ತೂಗಿದರೆ ಆನೆಕೊಂಬನ್ ತಳಿಯದ್ದರಲ್ಲಿ ಹತ್ತರಿಂದ ಹನ್ನೆರಡು ಕಾಯಿ. ಸಾಮಾನ್ಯ ರುಚಿ. ಬೀಜ ಪ್ರದಾನಿಸಿ ನಲವತ್ತೈದು ದಿನದಲ್ಲಿ ಇಳುವರಿ ಶುರು.
                 ಚೌಟರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಸನಿಹದ ರಂಬುಟಾನ್ ತೋಟಕ್ಕೆ ಭೇಟಿ ನೀಡಿದ್ದರು. ದೊಡ್ಡ ಪ್ರಮಾಣದ ಕೃಷಿ ನೋಡಿ ಉತ್ಸುಕರಾದರು. ಕೃಷಿ ಕ್ರಮಗಳನ್ನು ತಿಳಿದುಕೊಂಡರು. ಇತರ ತೋಟಗಳಿಗೂ ಭೇಟಿ ನೀಡಿದರು. ಕೇರಳದ ತೋಟಕ್ಕೂ ಲಗ್ಗೆಯಿಟ್ಟರು. ಹೀಗೆ ಅವಿರತ ಪ್ರವಾಸ ಮಾಡಿದ್ದರಿಂದಾಗಿ ಚೌಟರ ತೋಟದಲ್ಲಿ ಈಗ ಸುಮಾರು ಐನೂರರ ಹತ್ತಿರ ರಂಬುಟಾನ್ ಗಿಡಗಳು ಬೆಳೆಯುತ್ತಿವೆ. ಹಳೆಯ ಗಿಡಗಳು ಇಳುವರಿ ನೀಡುತ್ತಿವೆ.
                 ಚೌಟರಲ್ಲಿಗೆ ಭೇಟಿಯಿತ್ತ ಬೆಂಗಳೂರು ವಿಶ್ವವಿದ್ಯಾನಿಲಯದ ಕೃಷಿ ಮೂಲದ ವರಿಷ್ಠರೊಬ್ಬರನ್ನು ರಂಬುಟಾನ್ ಹಣ್ಣು ಸೆಳೆಯಿತು. ರುಚಿ ನೋಡಿದ ಅವರು ಸ್ಥಳದಲ್ಲೇ ಐವತ್ತು ಗಿಡಗಳಿಗೆ ಬೇಡಿಕೆ ಸಲ್ಲಿಸಿದರು. ಬೆಂಗಳೂರಿನಲ್ಲಿ ಹಣ್ಣು ಹೂ ಬಿಡುವ, ಬೆಳವಣಿಗೆಯ ಕ್ರಮ ಗೊತ್ತಿಲ್ಲ. ನಾಲ್ಕೈದು ಗಿಡ ನೆಟ್ಟು, ಹೂ-ಕಾಯಿ ಬಿಡುತ್ತದೆ ಎಂದು ಖಾತ್ರಿಯಾದ ಬಳಿಕ ದೊಡ್ಡ ಪ್ರಮಾಣದಲ್ಲಿ ಕೃಷಿ ಮಾಡಬಹುದು, ಎಂದು ಸಲಹೆ ನೀಡಿದರು. ಚೌಟರ ಸಲಹೆ ಆಪ್ತವಾಗಿ ಸ್ವೀಕರಿಸಿದರು.
                 ಕೃಷಿ ಪ್ರವಾಸವು ಉಂಟುಮಾಡುವ ಕೃಷಿಕ-ಕೃಷಿಕರೊಳಗಿನ ಬಾಂಧವ್ಯದ ಬಂಧ ಗಟ್ಟಿಯಾದುದು. ವೈವಿಧ್ಯ ಬೆಳೆಯನ್ನು ನೋಡಿ, ಸುಖ-ಕಷ್ಟಗಳನ್ನು ಪರಸ್ಪರ ಹಂಚಿಕೊಂಡಾಗ ತನ್ನ ತೋಟದಲ್ಲಿ ಯಾವುದು ಬೆಳೆಯಬಹುದು, ಯಾವುದು ಬೇಡ ಎನ್ನುವ ನಿರ್ಧಾಾರಕ್ಕೆ ಬರಲು ಸಹಾಯಕ. ಗಿಡ ಗೆಳೆತನವನ್ನು ಬೆಸೆಯಲು ಅನುಕೂಲ. ಒಂದೂರಿನ ಕೃಷಿ ಪದ್ಧತಿಯು ಮತ್ತೊಂದು ಊರಿನ ಕೃಷಿ ಸಮಸ್ಯೆಗೆ ಉತ್ತರವಾಗಬಹುದು. ತಪ್ಪುಗಳನ್ನು ತಿದ್ದಿಕೊಳ್ಳಲು ಪೂರಕ. ಕೃಷಿಯಲ್ಲಿ ಪುಸ್ತಕದ ಜ್ಙಾನಕ್ಕಿಂತ ಪ್ರವಾಸ ಜ್ಞಾನ ಹೆಚ್ಚು ಬೌದ್ಧಿಕತೆಯನ್ನು ತಂದುಕೊಡುತ್ತದೆ.
                ಪ್ರವಾಸ ಹೋದಾಗ ಕೆಲವು ಕೃಷಿಕರು ಮಾಹಿತಿ ಬಿಟ್ಟುಕೊಡುವುದಿಲ್ಲ ಎನ್ನುವ ಅಪವಾದವೂ ಇದೆ. ಇಲ್ಲದಿಲ್ಲ, ಆದರೆ ಬಹಳ ಕಡಿಮೆ. ಬಹುತೇಕರಿಗೆ ತನ್ನ ಕೃಷಿಯ ಕಷ್ಟ-ಸುಖಗಳನ್ನು ಹಂಚಿಕೊಳ್ಳುವ ಉತ್ಸಾಹವಿರುತ್ತದೆ. ನನಗೆ ರೈತರು ಮಾಹಿತಿ ನೀಡದೆ ಎಂದೂ ವಂಚಿಸಿಲ್ಲ. ಚಿಕ್ಕಪುಟ್ಟ ಗುಟ್ಟುಗಳಿರಬಹುದು ಬಿಡಿ. ನಾವು ಎಲ್ಲಿಗೆ, ಯಾಕಾಗಿ ಹೋಗುತ್ತೇವೆ ಎನ್ನುವ ರೂಪುರೇಷೆ ಹಾಕಿಕೊಳ್ಳಬೇಕು. ಕೇರಳ, ಗೋವಾ, ಮಹಾರಾಷ್ಟ್ರಗಳ ಹಲವಾರು ಕೃಷಿಕರಿಂದ ಒಳ್ಳೊಳ್ಳೆಯ ಕೃಷಿ ಮಾಹಿತಿ ತಿಳಿದುಕೊಂಡಿದ್ದೆ. ಈ ರೀತಿಯ ಪ್ರವಾಸಗಳ ಅನುಭವವನ್ನು ನನ್ನ ತೋಟವೇ ಹೇಳುತ್ತದೆ, ಡಾ.ಚೌಟರು ಖುಷಿ ಹಂಚಿಕೊಂಡರು.  
                  ಪುತ್ತೂರು ಬೆಟ್ಟಂಪಾಡಿಯ ಕೃಷಿಕ ಅರುಣ್ ಕುಮಾರ್ ರೈ ಆನಾಜೆ ದುಬೈ, ಥೈಲ್ಯಾಂಡ್ ದೇಶಗಳಿಗೆ ಪ್ರವಾಸ ಹೋಗಿದ್ದರು. ಕೃಷಿ ಉತ್ಪನ್ನಗಳ ಮಾಲ್ಗಳಿಗೆ ಹೋಗಿ ಮೌಲ್ಯವರ್ಧಿತ ಉತ್ಪನ್ನಗಳ ಹುಡುಕಾಟ ಮಾಡುವುದು ಅವರ ಆಸಕ್ತಿಯ ಭಾಗ. ಹಲಸಿನ, ತೆಂಗಿನ ಉತ್ಪನ್ನಗಳ ಪ್ಯಾಕೆಟನ್ನು ಆಯಾಯಾ ಹಣ್ಣಿನ ಆಕಾರದಲ್ಲಿ ಸಿದ್ಧಪಡಿಸಿದ್ದರು. ಊರಿಗೆ ಮರಳುವಾಗ ತೋರಿಸಲೆಂದು ಅಂತಹ ಪ್ಯಾಕೆಟುಗಳನ್ನು ತಂದಿದ್ದರು. ಆಸಕ್ತರಿಗೆ ತೋರಿಸಿದರು. ರೈಯವರು ತಾರದೇ ಇರುತ್ತಿದ್ದರೆ ಇಂತಹ ಯತ್ನಗಳು ಆಗಿರುವುದು ಗೊತ್ತಾಗುವ ಸಾಧ್ಯತೆ ಕಡಿಮೆ. ಕೃಷಿ ಪ್ರವಾಸಗಳು ನಮ್ಮನ್ನು ಅಪ್ಡೇಟ್ ಮಾಡಿಸುತ್ತವೆ. ಹೊಸ ಸಂಗತಿಗಳನ್ನು ಹತ್ತಿರದಿಂದ ನೋಡಿದಾಗ ಸತ್ಯದರ್ಶನವಾಗುತ್ತದೆ. ಇಲ್ಲದಿದ್ದರೆ ಸಂಶಯದೊಳಗೆ ಸುತ್ತುತ್ತಾ ಇರಬೇಕಷ್ಟೇ, ಎನ್ನುತ್ತಾರೆ ಅರಣ್.
                   ಶಿರಸಿಯ ಕೃಷಿಕ ಬಾಲಚಂದ್ರ ಹೆಗಡೆ ಸಾಯಿಮನೆ ಇಪ್ಪತ್ತಾರು ದೇಶಗಳನ್ನು ಸುತ್ತಿದ ಸಾಹಸಿ. ಶ್ರೀಲಂಕಾ ದೇಶದಲ್ಲಿ ಪಾಮ್ನಾಮ್, ಫಿಲಿಪೈನ್ಸ್ನಲ್ಲಿ ಕೈಮಿತೋ ಹಣ್ಣು.. ಹೀಗೆ ಆಯಾಯ ದೇಶದ ಹಣ್ಣಿನ ಗಿಡಗಳನ್ನು ಪಡೆಯುವಲ್ಲಿ ಹರಸಾಹಸ ಮಾಡಿದ್ದಾರೆ, ಮಾಡುತ್ತಿದ್ದಾರೆ. ಅಡಿಕೆಯ ವಿವಿಧ ಉಪಯೋಗ, ಔಷಧವಾಗಿ ಬಳಕೆ ಮಾಡುವ ಕುತೂಹಲಕರ ಮಾಹಿತಿ ಹೊತ್ತು ತಂದಿದ್ದರು. ವಿದೇಶಿ ಹೊಲಗಳಲ್ಲಿ ಕೃಷಿಕರ ಬದಲು ಯಂತ್ರವೇ ಕಾಣಿಸುತ್ತದಂತೆ! ಸಣ್ಣ ರೈತರು ಕುಟುಂಬಾಧಾರಿತವಾಗಿ ಕೃಷಿ ಮಾಡುವುದನ್ನು ಹತ್ತಿರದಿಂದ ನೋಡಿದ್ದಾರೆ. ಎಲ್ಲಾ ದೇಶವನ್ನು ಸುತ್ತಾಡಿದ ಸಾಯಿಮನೆಯವರು  ಹೇಳಿದ್ದೇನು ಗೊತ್ತೇ -  'ನಮ್ಮ ದೇಶದಲ್ಲಿರುವಷ್ಟು ವೈವಿಧ್ಯತೆ ಬೇರೆಲ್ಲೂ ಇಲ್ಲ'.
                 ಹಿರಿಯ ಪತ್ರಕರ್ತ ಶ್ರೀ ಪಡ್ರೆಯವರು ಹವಾಯ್ ಮತ್ತು ಶ್ರೀಲಂಕಾ ದೇಶಕ್ಕೆ ಪ್ರವಾಸ ಮಾಡಿದ್ದರು. ಶ್ರೀಲಂಕಾದಲ್ಲಿ ಹಲಸನ್ನು 'ಅನ್ನದ ಮರ' ಎಂದು ಕರೆಯುತ್ತಾರೆ. ಇದರ ಮೌಲ್ಯವರ್ಧಿತ ಉತ್ಪನ್ನಗಳ ಉದ್ದಿಮೆಗಳ ಸಂದರ್ಶನ. ಹಲಸಿನ ತೋಟಗಳ ವೀಕ್ಷಣೆ. ಬದುಕಿನಲ್ಲಿ ಹಲಸನ್ನು ಆಹಾರವಾಗಿ ಸ್ವೀಕರಿಸಿದ ಶ್ರೀಲಂಕನ್ನರು ಅನ್ನಕ್ಕೆ ಬರ ಬಂದರೂ ವಿಚಲಿತರಾಗರು! ಹಣ್ಣುಗಳ ದೇಶ ಹವಾಯಿ ಸುತ್ತಿದ ಶ್ರೀಪಡ್ರೆಯವರು ಹೊಸ ಹೊಸ ಹಣ್ಣುಗಳ ಪರಿಚಯ ಮಾಡಿಕೊಂಡರು. ಬೆಳೆ ವೈವಿಧ್ಯತೆ, ಆಹಾರ, ರುಚಿ ವೈವಿಧ್ಯತೆಯನ್ನು ನೋಡಲು, ಅನುಭವಿಸಲು ಪ್ರವಾಸ ಬೇಕು, ಎನ್ನುತ್ತಾರೆ.
                 ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಸ್ವ-ಸಹಾಯ ಸಂಘಗಳ ಮೂಲಕ ಕಿರು ಆರ್ಥಿಕ ವ್ಯವಹಾರವನ್ನು ನಿರ್ವಹಣೆ ಮಾಡುವ ಅಧ್ಯಯನಕ್ಕಾಗಿ ಬಾಂಗ್ಲಾ ದೇಶವನ್ನು ಆಯ್ಕೆ ಮಾಡಿತ್ತು. ಅಲ್ಲಿ ಮಹಿಳೆಯರಿಗೆ ಆರ್ಥಿಕ ಸೌಲಭ್ಯ ನೀಡಿ ಅವರನ್ನು ಹೇಗೆ ಸ್ವಾವಲಂಬಿಯಾಗಿ ಮಾಡಬಹುದು ಎನ್ನುವುದು ಆಧ್ಯಯನದಿಂದ ಅರಿವಿಗೆ ಬಂತು ಎನ್ನುವ ಯೋಜನೆಯ ನಿರ್ದೇಶಕರಲ್ಲೊಬ್ಬರಾದ ಜಯಶಂಕರ ಶರ್ಮ ಹೇಳುತ್ತಾರೆ, ಯೋಜನೆಯು ಹಮ್ಮಿಕೊಳ್ಳುವ ಪ್ರವಾಸದಿಂದಾಗಿ ಕಟಪಾಡಿ ಮಲ್ಲಿಗೆಯ ಕೃಷಿಯನ್ನು ಮಾಡಲು ಧ್ಯೆರ್ಯ ಬಂತು. ಕೃಷಿ ಕ್ರಮಗಳನ್ನು ತಿಳಿದುಕೊಳ್ಳಲು ಸಾಧ್ಯವಾಯಿತು. ಯೋಜನೆಯ ಬಹುತೇಕ ಮಹಿಳೆಯರಿಂದು ಮಲ್ಲಿಗೆ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ..
               ಕೃಷಿ ಪ್ರವಾಸಗಳು ಕೃಷಿ ಕ್ಷೇತ್ರದ ಹೊಸ ಹೊಳವುಗಳನ್ನು ತಿಳಿಸುವ ಉಪಾಧಿ. ಕೃಷಿಕರಿಂದಲೇ ರೂಪುಗೊಂಡ ತಂಡಗಳು ಯಶಸ್ವಿಯಾಗಿ ಪ್ರವಾಸಗಳನ್ನು ಮಾಡುತ್ತಿವೆ. ಪುತ್ತೂರಿನ ಗಿಡ ಗೆಳೆತನ ಸಂಘ 'ಸಮೃದ್ಧಿ'ಯ ತಂಡ ಎರಡು ದಶಕಕ್ಕೂ ಮಿಕ್ಕಿ ಕನ್ನಾಡಿನ ವಿವಿಧ ಕೃಷಿ ಕ್ಷೇತ್ರಗಳನ್ನು ಸಂದರ್ಶಿಸಿದೆ. ಇಂದು ಕರಾವಳಿಗೆ ಬನಾರಸ್ ನೆಲ್ಲಿ, ಬೀಜರಹಿತ ನೇರಳೆ, ಗಾಸರ್ೀನಿಯಾ ಕೋವಾ.. ಮೊದಲಾದ ಹಣ್ಣುಗಳು ಪ್ರವೇಶಿಸಿರುವುದು ಸಮೃದ್ಧಿಯಿಂದ. ಇದರ ಸದಸ್ಯರ ತೋಟಕ್ಕೆ ಹೋದಾಗ ಒಂದೊಂದು ಗಿಡದ ಹಿಂದೆ ರೋಚಕ ಕಥನಗಳನ್ನು ಹೇಳುವುದು ಕೃಷಿಕರಿಗೆ ರೋಚಕ ಅನುಭವ.
               ಕನ್ನಾಡಿನಲ್ಲಿ ಕೃಷಿ ಪ್ರವಾಸಗಳನ್ನು ಕೈಗೊಳ್ಳುವ ತಂಡಗಳಿವೆ. ಕೃಷಿ ಪ್ರವಾಸದ ಹೆಸರಿನಲ್ಲಿ ಧಾರ್ಮಿಕ ಕ್ಷೇತ್ರಗಳನ್ನು ಸಂದರ್ಶಿಸಿ, ಕಾಟಾಚಾರಕ್ಕೆ ಒಂದೆರಡು ತೋಟಗಳನ್ನು ವೀಕ್ಷಿಸುವ ಪರಿಪಾಠದ ತಂಡಗಳೂ ಇವೆ. ಇಂತಹುದರಲ್ಲಿ  ಕೃಷಿಯ ಹೊರತು ಮಿಕ್ಕೆಲ್ಲಾ ಆಸಕ್ತಿಯ ಮಂದಿ ಇರುತ್ತಾರೆ. ಇವರಿಗೆ ಕೃಷಿ ಇಷ್ಟವಾಗುವುದಿಲ್ಲ. ಪ್ರವಾಸದ ಶೀರ್ಶಿಕೆಗೆ ಮಾತ್ರ ಕೃಷಿ ಹೊಸೆದಿರುತ್ತದಷ್ಟೇ. ಕೃಷಿ ಪ್ರವಾಸವು ಅಧ್ಯಯನ ಪ್ರವಾಸವಾಗಬೇಕು.
                  ಸರಕಾರಿ ಪ್ರಾಯೋಜಿತ ಕೃಷಿ ಪ್ರವಾಸಗಳು ಯಶವಾಗುವುದು ಕಡಿಮೆ. ಇಲ್ಲವೆಂದಲ್ಲ. ಅಲ್ಲಿರುವ ಅಧಿಕಾರಿಯ ಆಸಕ್ತಿ, ಕೃಷಿಕರ ಮೇಲಿನ ಆಭಿಮಾನವನ್ನು ಹೊಂದಿಕೊಂಡು ಕಾರ್ಯಹೂರಣ ಸಿದ್ಧವಾಗುತ್ತದೆ. ಅಂತಹ ಪ್ರವಾಸದಿಂದ ಕೃಷಿಕರಿಗೆ ಲಾಭ. ಆದರೆ ಫಂಡ್ ಮುಗಿಸುವ ಪ್ರವಾಸಗಳ ಫೈಲುಗಳು ಇಲಾಖೆಗಳಲ್ಲಿ ನೂರಾರಿವೆ. ಇಂತಹ ಸಂದರ್ಭಗಳನ್ನು ಸದುಪಯೋಗಪಡಿಸಿಕೊಳ್ಳುವ 'ವೃತ್ತಿಪರ ಫಲಾನುಭವಿ'ಗಳು ತುದಿಗಾಲಲ್ಲಿರುತ್ತಾರೆ! ಇವರಿಗೆ ಚೀನಾ, ಇಸ್ರೆಲ್ನಂತಹ ವಿದೇಶಿ ಪ್ರವಾಸಗಳು ರಜಾಕಾಲದ ಟೂರ್! ಕೃಷಿ ಅಧ್ಯಯನದ ಹೆಸರಿನಲ್ಲಿ ಜನನಾಯಕರ ಪ್ರವಾಸ ಕಥನ ಹೇಳಿದರೆ ಬೇತಾಳನ ಕಥೆಯಂತೆ ನಮ್ಮ ತಲೆ ನೂರಲ್ಲ, ಸಾವಿರ ಹೋಳಾಗುವ ಭೀತಿಯಿದೆ!
                 ಕೃಷಿ ಪ್ರವಾಸವು ತಿರುಗಾಟವಾಗಬಾರದು. ಅದು ಮಾಹಿತಿಗಳ ಆಪೋಶನವಾಗಬೇಕು. ಕಾಲಕಾಲದ ಜ್ಞಾನಗಳು ಅಪ್ಡೇಟ್ ಆಗಲು ಸುಲಭ ದಾರಿ. ಪ್ರವಾಸದ ಅನುಭವಗಳು ಬದುಕಿನಲ್ಲಿ, ಕೃಷಿಯಲ್ಲಿ ಪ್ರತಿಫಲನವಾದಾಗ ಪ್ರವಾಸದಿಂದ ಸಾರ್ಥಕ. ಇಲ್ಲದಿದ್ದರೆ ಬರಿಗುಲ್ಲು, ನಿದ್ದೆಗೇಡು!

(ಉದಯವಾಣಿಯ ನೆಲದ ನಾಡಿ ಅಂಕಣದಲ್ಲಿ ಪ್ರಕಟಿತ - 7-8-2014)